ಶಹಾಬಾದ: ಲಾಕ್ಡೌನ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಬೀದಿಗಿಳಿದ ವಾಹನ ಸವಾರರಿಗೆ ಸೋಮವಾರ ಪೊಲೀಸರು ಲಾಠಿ ರುಚಿ ತೋರಿಸಿದಲ್ಲದೇ, ಕೆಲವು ವಾಹನಗಳನ್ನು ಸೀಜ್ ಮಾಡಿದ್ದಾರೆ.
ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೂ ಕೆಲವು ಪ್ರದೇಶಗಳಲ್ಲಿ ಜನ ಅನಗತ್ಯವಾಗಿ ಓಡಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಅಲ್ಲದೇ ಬ್ಯಾಂಕ್ ಸಿಬ್ಬಂದಿಗಳು, ಸರಕಾರ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಗುರುತಿನ ಚೀಟಿ ನೀಡಿದರೇ ಮಾತ್ರ ಹೋಗಲು ಅವಕಾಶ ನೀಡಿದರು.ಒಂದು ವೇಳೆ ಗುರುತಿನ ಚೀಟಿ ಮರೆತು ಬಂದವರನ್ನು ಅವರ ಅಧಿಕಾರಿಗಳು ಬಂದು ತಿಳಿಸಿದಾಗ ಹೋಗಲು ಬಿಡಲಾಯಿತು.ಅನಗತ್ಯವಾಗಿ ಓಡಾಡುವವರಿಗೆ ಬ್ರೇಕ್ ಹಾಕಲಾಯಿತು.
ಸೋಮವಾರ ಬೆಳಿಗ್ಗೆ ಸ್ವತಃ ತಹಸೀಲ್ದಾರರು ಪ್ರಮುಖ ಪ್ರದೇಶಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿಕೆಲವರು ಅನಗತ್ಯವಾಗಿ ಓಡಾಡುತ್ತಿರುವುದು ಕಂಡು ಬಂತು. ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳಿ. ಅದಕ್ಕೂ ಮಣಿಯದಿದ್ದರೇ ವಾಹನಗಳನ್ನು ಸೀಜ್ ಮಾಡಲು ಪೊಲೀಸರಿಗೆ ತಿಳಿಸಿದರು. ನಗರ ಪೊಲೀಸರು ವಾಹನಗಳಲ್ಲಿ ಅನಗತ್ಯ ಸಂಚರಿಸುತ್ತಿರುವವರನ್ನು ಪತ್ತೆ ಹಚ್ಚಿ ಲಾಠಿ ರುಚಿ ತೋರಿಸಿದರು. ಬೇಕಾಬಿಟ್ಟಿ ವಾಹನಗಳಲ್ಲಿ ಸಂಚರಿಸುತ್ತಿದ್ದವರ ಮೇಲೆ ಲಾಠಿ ಪ್ರಯೋಗ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಸುರೇಶ ವರ್ಮಾ, ನಗರದಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಾಗರೀಕರು ವಿನಾಕಾರಣ ಮನೆಯಿಂದ ಹೊರಬರಬಾರದು, ಒಂದು ವೇಳೆ ನಿಯಮ ಉಲ್ಲಂಘಿಸಿ ಬೀದಿಗಿಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದು ಕೊರೊನಾ ಮಹಾಮಾರಿ ಹೊಡೆದೊಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಒಂದು ವೇಳೆ ವಿನಾಕಾರಣ ಬೀದಿಗಿಳಿದು ನಿಯಮ ಉಲ್ಲಂಘಿಸುವುದು ಕಂಡುಬಂದರೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.