ಸುರಪುರ: ಪ್ರತಿ ವರ್ಷ ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆಯಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಗುವ ತಾಲೂಕಿನ ನೀಲಕಂಠರಾಯನಗಡ್ಡಿಗೆ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ವಿವಿಧ ಕಂದಾಯ ಅಧಿಕಾರಿಗಳೊಂದಿಗೆ ನೀಲಕಂಠರಾಯನಗಡ್ಡಿಗೆ ಭೇಟಿ ನೀಡಿದ ತಹಸೀಲ್ದಾರರು ಅಲ್ಲಿಯ ಜನರೊಂದಿಗೆ ಸಭೆ ನಡೆಸಿ ಪ್ರವಾಹ ಸಂದರ್ಭದಲ್ಲಿಯ ಸಮಸ್ಯೆಯ ಕುರಿತು ಮಾಹಿತಿ ಪಡೆದುಕೊಳ್ಳುವ ಜೊತೆಗೆ ಅಲ್ಲಿಯ ಎಲ್ಲಾ ೬೨ ಕುಟುಂಬದ ಜನರು ಬೇರೆಡೆಗೆ ಸ್ಥಳಾಂತರಗೊಳ್ಳಲು ಮನವಿ ಮಾಡಿದರು.ನಂತರ ಜನರು ಕೂಡ ತಹಸೀಲ್ದಾರರ ಮನವೊಲಿಕೆಗೆ ಸಮ್ಮತಿಸಿ ಬೇರೆಡೆಗೆ ಸ್ಥಳಾಂತರಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.ಅಲ್ಲದೆ ಜನರನ್ನು ಸುರಕ್ಷಿತವಾದ ಸ್ಥಳದಲ್ಲಿ ಉಳಿದುಕೊಳ್ಳಲು ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸುವುದಾಗಿ ಜನರಿಗೆ ಭರವಸೆಯನ್ನು ನೀಡಿದ್ದಾರೆ.
ಕೃಷ್ಣಾ ನದಿಯ ದಡದಿಂದ ಸುಮಾರು ೨ ಕಿಲೋ ಮೀಟರ್ ವರೆಗೆ ತಹಸೀಲ್ದಾರರು ಕಾಲ್ನಡಿಗೆಯಲ್ಲಿ ನೀಲಕಂಠರಾಯನಗಡ್ಡಿಗೆ ನಡೆದುಕೊಂಡು ಹೋಗಿರುವ ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರ ಕರ್ತವ್ಯ ನಿಷ್ಠೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಕಕ್ಕೇರಾ ಉಪ ತಹಸೀಲ್ದಾರ ರೇವಪ್ಪ ತೆಗ್ಗಿನ ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ ಗ್ರಾಮ ಲೆಕ್ಕೀಗ ಬಸವರಾಜ ಭೀಮು ಯಾದವ್ ಗೃಹರಕ್ಷಕ ದಳದ ಸಿಬ್ಬಂದಿ ಚಂದ್ರು ದೊಡ್ಮನಿ ದೀವಳಗುಡ್ಡ ಇತರರಿದ್ದರು.