ಬೆಂಗಳೂರು: ನಾವು ಶಾಂತಿಗಾಗಿ ಭದ್ರತೆಯನ್ನು ಭಯಸುತ್ತೇವೆ. ಇದು ನಮ್ಮ ಭಾರತದ ತತ್ವಶಾಸ್ತ್ರ ಎಂದು ಗೌರವಾನ್ವಿತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ತಿಳಿಸಿದರು.
ಬೆಂಗಳೂರು ನಗರದ ಭೇಟಿಗಾಗಿ ದಿನಾಂಕ ಆಗಸ್ಟ್ 16 ರಂದು ಆಗಮಿಸಿದ್ದ ರಾಷ್ಟ್ರದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಎಂ. ವೆಂಕಯ್ಯನಾಯ್ಡು ಅವರು ಇಂದು ಭಾರತ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್) ಗೆ ಭೇಟಿ ನೀಡಿದರು. ಈ ಸಮಯದಲ್ಲಿ ಹೆಚ್.ಎ.ಎಲ್ ನ ಅಧ್ಯಕ್ಷರಾದ ಆರ್. ಮಾದವನ್ ಅವರು ಉಪರಾಷ್ಟ್ರಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಹೆಚ್.ಎ.ಎಲ್ ನ ಹೆಲಿಕಾಪ್ಟರ್ ವಿಭಾಗದ ಹೆಲಿಕಾಪ್ಟರ್ ನಿರ್ಮಾಣ ಘಟಕಗಳಾದ ಎಲ್.ಸಿ.ಹೆಚ್ ಹ್ಯಾಂಗರ್ ಹಾಗೂ ಎ.ಎಲ್.ಹೆಚ್ ಹ್ಯಾಂಗರ್ ಗಳಲ್ಲಿ ನಿರ್ಮಾಣ ಮಾಡಲಾಗುವ ಹೆಲಿಕಾಪ್ಟರ್ ಹಾಗೂ ಹಗುರ ಹೆಲಿಕಾಪ್ಟರ್ ತೇಜಸ್ ನಿರ್ಮಾಣದ ಕುರಿತು ಮಾಹಿತಿಯನ್ನು ಒದಗಿಸಿದರು.
ನಂತರ ಹೆಲಿಕಾಪ್ಟರ್ ರಚನಾತ್ಮಕ ಜೋಡಣೆ (ವಿಂಗ್) ಹ್ಯಾಂಗರ್ ಭೇಟಿ ನೀಡಿದರು. ಹೆಲಿಕಾಪ್ಟರ್ ಗೆ ಬಳಸುವ ಉಪಕರಣಗಳು, ಬಿಡಿಭಾಗಗಳು ಹಾಗೂ ಹೆಲಿಕಾಪ್ಟರ್ ರಚನೆಯ ಬಗ್ಗೆ ವಿವರವಾಗಿ ಹೆಚ್.ಎ.ಎಲ್. ನ ಅಧ್ಯಕ್ಷ ಆರ್. ಮಾಧವನ್ ಮಾಹಿತಿ ಒದಗಿಸಿದರು.
ನಂತರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಆಕಾಶ್ ಆಡಿಟೋರಿಯಂನಲ್ಲಿ ಹೆಚ್.ಎ.ಎಲ್.ನ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಶಾಂತಿ ಪ್ರಿಯರು, ನಮ್ಮ ಶಾಂತಿಗೆ ಧಕ್ಕೆ ಬಂದಾಗ ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಎದುರಾಳಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
ಬೆಂಗಳೂರು ನಗರ ಇಂದು ರಾಷ್ಟ್ರದ ವಾಯುಯಾನ ಬಂಡವಾಳ ನಗರವಾಗಿದೆ. ಇಲ್ಲಿ ತಯರಿಸಲಾಗುವ ಅತ್ಯಾಧುನಿಕ ರಕ್ಷಣಾ ಉಪಕರಣಗಳು ನಮ್ಮ ರಕ್ಷಣಾ ಕ್ಷೇತ್ರದ ಬಲವನ್ನು ವೃದ್ದಿಸುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಇಂದು ನಾನು ಪ್ರಪ್ರಥಮ ಬಾರಿಗೆ ಹೆಚ್.ಎ.ಎಲ್.ಗೆ ಭೇಟಿ ನೀಡುತ್ತಿದ್ದು ಇಲ್ಲಿನ ವ್ಯವಸ್ಥೆಯನ್ನು ನೋಡಿ ತುಂಬಾ ಸಂತೋಷವಾಗಿದೆ. ಏರೋಸ್ಪೇಸ್ ನ್ನು ರಕ್ಷಣೆಮಾಡುವುದು ನಮ್ಮೆಲ್ಲರ ಜವಾಬ್ದಾರಿ . ಕಳೆದ 8 ವರ್ಷಗಳಿಂದ ಹೆಚ್.ಎ.ಎಲ್. ಅತ್ಯಾದುನಿಕ ತಂತ್ರಜ್ಞಾನದೊಂದಿಗೆ ರಕ್ಷಣಾ ವಲಯಕ್ಕೆ ಬೇಕಾಗುವ ಯುದ್ದ ವಿಮಾನಗಳು ಹಗುರವಾದ ಹೆಲಿಕ್ಯಾಪ್ಟರ್ ಗಳ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿನ ವಿಜ್ಞಾನಿಗಳು, ಅಧಿಕಾರಿಗಳು, ತಂತ್ರಜ್ಞರು ತಮ್ಮ ಜವಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ನಾವು ಯಾವುದೇ ರಾಷ್ಟ್ರಕ್ಕೂ ಕಡಿಮೆ ಇಲ್ಲ. ನಾವು ವಿಜ್ಞಾನ ಹಾಗೂ ತಂತ್ರಜ್ಞಾದಲ್ಲಿ ಮಂಚೂಣಿಯಲ್ಲಿದ್ದು, ಇತರ ರಾಷ್ಷ್ರಗಳೊಂದಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದೇವೆ. ಇಂದಲ್ಲ ನಾಳೆ ನಾವು ರಕ್ಷಣಾ ಉಪಕರಣಗಳನ್ನು ರಪ್ತು ಮಾಡುವ ಪ್ರಮುಖ ದೇಶವಾಗಿ ಮುಂದುವರೆಯುತ್ತೇವೆ. ಸುರಕ್ಷತೆ ಮತ್ತು ಭದ್ರತೆ ನಮ್ಮ ದೇಶದಲ್ಲಿ ಉತ್ತಮವಾಗಿದೆ. ನಾವು ಯಾವುದೇ ಭಯೋತ್ಪಾದನಾ ಘಟನೆಗಳು ನಡೆಸಲು ಅವಕಾಶ ನೀಡುವುದಿಲ್ಲ. ಭಯೋತ್ಪಾದನಾ ಚಟುವಟಿಕೆ ವಿರುದ್ದ ಹೊರಾಟ ನಡೆಸುವ ಶಕ್ತಿ ಮತ್ತು ಸಾಮರ್ಥ್ಯ ನಮ್ಮಲ್ಲಿದೆ ಎಂದು ತಿಳಿಸಿದರು.
ನಮ್ಮ ದೇಶ ಅತ್ಯಂತ ಪ್ರಾಚೀನ ನಾಗರೀಕತೆ ಹೊಂದಿರುವ ದೇಶವಾಗಿದೆ ನಾವು ಯಾರೊಂದಿಗೂ ಯುದ್ದಮಾಡಲು ಬಯಸುವುದಿಲ್ಲ ಅದು ನಮ್ಮಸಂಸ್ಕ್ರತಿ ಅಲ್ಲ. ಎಲ್ಲರೂ ಸಂತೋಷದಿಂದ ಇರಬೇಕು ಎಂಬುದು ನಮ್ಮ ದೇಶದ ಅಶಯ. ಬೇರೆಯವರು ನಮ್ಮ ಮೇಲೆ ಮುಗಿಬಿದ್ದಾಗ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ, ಅದಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಕ್ಷಣಾ ಕ್ಷೇತ್ರಕ್ಕೆ ಬಹಳ ಒತ್ತು ನೀಡಿದ್ದಾರೆ. ರಪ್ತು ನೀತಿ ಪಾಲಿಸಿಯನ್ನು ಈಗಾಗಲೇ ಜಾರಿಗೆ ತಂದಿದ್ದಾರೆ. ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಎರಡು ರಕ್ಷಣಾ ಕಾರಿಡಾರ್ ನಿರ್ಮಾಣ ಮಾಡಲು ಕ್ರಮ ಜರುಗಿಸಿದ್ದಾರೆ ಎಂದು ತಿಳಿಸಿದರು.
ನಾವು ಸ್ಪರ್ಧಾತ್ಮಕ ಉತ್ಪನ್ನಗಳನ್ನು ತಯಾರಿಸಲು ಹೆಚ್ಚು ಒತ್ತು ನೀಡಬೇಕು. ಎಂ.ಎಸ್.ಎಂ.ಇಗಳನ್ನು ಉತ್ತೇಜಿಸಬೇಕು. ಇದನ್ನು ಹೆಚ್.ಎ.ಎಲ್ ಸಂಸ್ಥೆ ಇದರ ಜವಬ್ದಾರಿ ಹೊತ್ತುಕೊಳ್ಳಬೇಕು. ಈಗಾಗಲೇ ಸಂಸ್ಥೆಯು ತೇಜಸ್ ಹಗುರ ವಿಮಾನ ನಿರ್ಮಾಣ ಮಾಡುತ್ತಿರುವುದು ಸಂತೋಷ ತಂದಿದೆ. 83 ಹೊಸ ಸ್ವದೇಶಿ ಲಘು ಯುದ್ಧ ವಿಮಾನ ತೇಜಸ್ ಎಂಕೆ 1 ಎ ತಯಾರಿಸಲು ಭಾರತೀಯ ವಾಯುಪಡೆಯಿಂದ ಎಚ್ಎಎಲ್ ಆದೇಶ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಡಿ.ಆರ್.ಡಿ.ಓ ವಿಮಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದು ಉತ್ತಮವಾದ ಕೆಲಸ. ಆರ್ಥಿಕತೆಗೆ ಒತ್ತು ನೀಡಿ, ಉತ್ಪಾದನಾ ಉದ್ಯಮವನ್ನು ನಾವು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಉಪ ರಾಷ್ಟ್ರಪತಿಗಳು ತಿಳಿಸಿದರು.
ನಂತರ ಮಾತನಾಡಿದ ರಾಜ್ಯಪಾಲರು, ಭಾರತದ ಇತಿಹಾಸ ಮತ್ತು ಅಭಿವೃದ್ಧಿಯನ್ನು ಪರಿಗಣಿಸಿದರೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ಇತಿಹಾಸ ಮತ್ತು ಅಭಿವೃದ್ಧಿಯ ನಡೆಯೇ ಕಳೆದ 75 ವರ್ಷಗಳಲ್ಲಿ ಭಾರತದಲ್ಲಿ ಏರೋನಾಟಿಕಲ್ ಉದ್ಯಮದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. . ಮೈಸೂರು ಸರ್ಕಾರದ ಸಹಯೋಗದೊಂದಿಗೆ ದೂರದೃಷ್ಠಿ ಉದ್ಯಮಿ ಶ್ರೀ ವಾಲ್ ಚಂದ್ ಹೀರಾಚಂದ್ ಅವರು 1940 ರ ಡಿಸೆಂಬರ್ 23 ರಂದು ಭಾರತದ ಯುದ್ಧ ವಿಮಾನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ವಿಮಾನ ಕಾರ್ಖಾನೆ ರೂಪದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.
ಭಾರತೀಯ ರಕ್ಷಣಾ ಏರೋಸ್ಪೇಸ್ ಕ್ಷೇತ್ರದಲ್ಲಿ ಹೆಚ್ ಎಎಲ್ 75 ವರ್ಷ ಪೂರ್ಣಗೊಳಿಸಿರುವುದಕ್ಕೆ ಅಭಿನಂದಿಸುತ್ತೇನೆ. ಕಳೆದ ದಶಕಗಳಲ್ಲಿ ಈ ಸಂಸ್ಥೆ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ಮುಂಬರುವ ದಿನಗಳಲ್ಲೂ ಇನ್ನು ಹೆಚ್ಚಿನ ಕಾರ್ಯಕೈಗೊಳ್ಳಲಿದೆ ಎಂಬ ಭರವಸೆ ಮೂಡಿದೆ. ಹೆಚ್ ಏಎಲ್ ದೇಶದ ಗೌರವ ಹೆಚ್ಚಿಸಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದೆ. ಭಾರತದ ವಾಯು ಪಡೆಗೆ ಹೆಚ್ ಏಎಲ್ ಪ್ರಮುಖ ಸಂಸ್ಥೆಯಾಗಿದೆ. ತೇಜಸ್ ಎಂ ಕೆ ಸರಣಿಯ ವಿಮಾನ ನಿರ್ಮಾಣಕ್ಕೆ ವಾಯುಪಡೆ ಹೆಚ್ ಏಎಲ್ ಅನುಮತಿ ನೀಡಿದೆ. ರಕ್ಷಣಾ ಏರೋಸ್ಪೇಸ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಎಚ್ಎಎಲ್ ಮುಂದಾಗಿದೆ ಎಂದು ತಿಳಿದು ತಮಗೆ ಸಂತೋಷವಾಗಿದೆ ಎಂದರು.
ಸಶಸ್ತ್ರ ಪಡೆಗಳ ಹೆಚ್ಚಿನ ಯೋಜನೆಗಳ ಅನುಷ್ಠಾನದಲ್ಲಿ ಎಚ್ಎಎಲ್ ಪ್ರಮುಖ ಪಾತ್ರ ವಹಿಸಿದೆ. ಫ್ರಂಟ್ ಎಂಡ್ ಫೈಟರ್, ಟ್ರೈನರ್ ಮತ್ತು ರಾಷ್ಟ್ರೀಯ ಹೆಲಿಕಾಪ್ಟರ್ ಸೇರಿದಂತೆ ಹಲವಾರು ವಿಮಾನಗಳನ್ನು ತಯಾರಿಸಿದೆ. ಎಚ್ಎಎಲ್ ತನ್ನ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ನೀಡುವುದರೊಂದಿಗೆ ಒಂದು ಪ್ರಮುಖ ಏರೋಸ್ಪೇಸ್ ಕಂಪನಿಯಾಗಿ ಹೊರಹೊಮ್ಮಿದೆ. ಇಸ್ರೋದೊಂದಿಗಿನ ಪಾಲುದಾರಿಕೆಯ ಮೂಲಕ ತನ್ನ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿದೆ. 83 ಹೊಸ ಸ್ವದೇಶಿ ಲಘು ಯುದ್ಧ ವಿಮಾನ ತೇಜಸ್ ಎಂಕೆ 1 ಎ ತಯಾರಿಸಲು ಭಾರತೀಯ ವಾಯುಪಡೆಯಿಂದ ಎಚ್.ಎ.ಎಲ್ ಆದೇಶ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. 48,000 ಕೋಟಿಯ ಇದು “ಮೇಕ್ ಇನ್ ಇಂಡಿಯಾ” ದ ಅತಿದೊಡ್ಡ ರಕ್ಷಣಾ ಒಪ್ಪಂದವಾಗಿದೆ ಎಂದರು.
ಎಚ್ಎಎಲ್ ದೇಶದಲ್ಲಿ ತನ್ನ ಪೂರೈಕೆದಾರರ ನೆಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವುದನ್ನು ಗಮನಿಸಿ ಸಂತೋಷವಾಗಿದೆ. ಏರೋ ಇಂಡಿಯಾ ಶೋ, ವಿಶ್ವದ ಏರೋಸ್ಪೇಸ್ ಕ್ಯಾಲೆಂಡರ್ ನಲ್ಲಿ ಒಂದು ಸ್ಟಾರ್ ಕಾರ್ಯಕ್ರಮವಾಗಿದ್ದು, 20 ವರ್ಷಗಳಿಂದಲೂ ನಡೆಸಲಾಗುತ್ತಿದೆ. ಪೂರ್ವಭಾವಿ ವ್ಯಾಪಾರ ವಿಧಾನದೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ತಾವು ಎಚ್ಎಎಲ್ ಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು.
ಎಚ್ಎಎಲ್ ಕಂಪನಿಯು ದೇಶದ ಗಣತೆಯನ್ನು ಕಾಪಾಡಲಿದೆ. ಮತ್ತು ರಾಷ್ಟ್ರದ ಏರೋಸ್ಪೇಸ್ ವಲಯವನ್ನು ಮುನ್ನಡೆಸುವ ಮೂಲಕ ಖ್ಯಾತಿಯನ್ನು ಸಾಧಿಸುತ್ತದೆ ಎಂದು ತಮಗೆ ಖಾತ್ರಿಯಿದೆ. ಅತ್ಯುತ್ತಮ ಸೇವೆಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು ಸಲ್ಲಿಸುವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಎಎಲ್ ಅಧ್ಯಕ್ಷ ಶ್ರೀ ಆರ್. ಮಾಧವನ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹೆಚ್.ಎ.ಎಲ್ ನ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಉಪಸ್ಥಿತರಿದ್ದರು.