ಕಲಬುರಗಿ: ಪ್ರವಾಸೋದ್ಯಮ ಇಲಾಖೆ 31 ಜಿಲ್ಲಾ ಸಮಾಲೋಚಕರ ಮರುನೇಮಕ ಮಾಡಿರುವುದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ತಾಣಗಳ ಅಂಕಿ-ಅಂಶ ಸಂಗ್ರಹಣೆ, ಪ್ರವಾಸಿ ಸ್ಥಾನಗಳ ಅಧ್ಯಯನ, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಪ್ರವಾಸಿ ಟ್ಯಾಕ್ಸಿ ಕಾರ್ಯಕ್ರಮ, ಪ್ರವಾಸಿ ಮಿತ್ರ ಸಿಬ್ಬಂದಿಗಳ ಮೇಲ್ವಿಚಾರಣೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಗೂ ಹೊರಗುತ್ತಿಗೆ ಆಧಾರದಲ್ಲಿ 31 ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರನ್ನು ನೇಮಕ ಮಾಡಿತ್ತು.
ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಈ ಸಮಾಲೋಚಕರನ್ನು ರಾಜ್ಯ ಬಿಜೆಪಿ ಸರ್ಕಾರ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಪ್ರವಾಸೋದ್ಯಮದ ಕತ್ತು ಹಿಸುಕಲು ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ 01 ಮಾರ್ಚ್ 2021 ರಂದು ಎಲ್ಲಾ ಜಿಲ್ಲಾ ಸಮಾಲೋಚಕರನ್ನು ಪುನಃ ಕರ್ತವ್ಯಕ್ಕೆ ನೇಮಿಸಿಕೊಳ್ಳುವಂತೆ ಪ್ರವಾಸೋದ್ಯಮ ಸಚಿವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದರು.
ಇದೀಗ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಆಗಸ್ಟ್ ತಿಂಗಳಿಂದಲೇ ಎಲ್ಲಾ ಜಿಲ್ಲಾ ಸಮಾಲೋಚಕರನ್ನು ಮರುನೇಮಕಗೊಳಿಸಿ ಆದೇಶ ಹೊರಡಿಸಿದೆ. ಇದು ವೈಯಕ್ತಿತವಾಗಿ ಸಂತಸ ನೀಡಿದೆ ಎಂದು ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಾಲೋಚಕರು ಹಿಂದಿನಂತೆ ಇನ್ನು ಮುಂದೆಯೂ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಶ್ರಮವಹಿಸುತ್ತಾರೆಂಬ ನಂಬಿಕೆ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.