ಸುರಪುರ: ನಗರಸಭೆ ಆವರಣದಲ್ಲಿ ಜಿಲ್ಲಾಧಿಕಾರಿ ಡಾ: ರಾಗಪ್ರಿಯಾ ಆರ್ ಅವರ ನೇತೃತ್ವದಲ್ಲಿ ಕೊರೊನಾ ಜಾಗೃತಿ ಹಾಗು ಬೀದಿ ನಾಟಕದ ಮೂಲಕ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.
ಶುಕ್ರವಾರ ನಡೆದ ಬೀದಿ ನಾಟಕ ಅಭಿಯಾನವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ರಾಗಪ್ರಿಯಾ ಮಾತನಾಡಿ,ಜಿಲ್ಲೆಯಾದ್ಯಂತ ಶೇ ೧೦೦ ರಷ್ಟು ಕೊರೊನಾ ಲಸಿಕೆ ವಿತರಣೆ ಗುರಿಯನ್ನು ಸಾಧಿಸಬೇಕು,ಅದಕ್ಕಾಗಿ ಎಲ್ಲರು ಶ್ರಮವಹಿಸುವಂತೆ ಕರೆ ನೀಡಿದರು.ಇದುವರೆಗೆ ಜಿಲ್ಲೆಯಾದ್ಯಂತ ಶೇ ೫೦ ರಷ್ಟು ಲಸಿಕೆ ವಿತರಣೆಯಾಗಿದೆ,ಇನ್ನುಳಿದ ೫೦ರ ಗುರಿ ಸಾಧಿಸಬೇಕೆಂದರು.
ಈಗಾಗಲೇ ಎರಡನೇ ಅಲೆ ಮುಗಿದಿದ್ದು ಮೂರನೇ ಅಲೆ ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ,ಅದಕ್ಕಿಂತ ಮುಂಚೆಯೆ ಎಲ್ಲರಿಗೂ ಲಸಿಕೆಯನ್ನು ನೀಡಿದಲ್ಲಿ ಮೂರನೇ ಅಲೆಯನ್ನು ತಡೆಯಲು ಸಾಧ್ಯವಿದೆ.ಎಲ್ಲರಿಗೂ ಲಸಿಕೆ ವಿತರಣೆ ಜಿಲ್ಲಾಡಳಿತದ ಗುರಿಯಾಗಿದ್ದು,ಅದಕ್ಕಾಗಿ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.ಈಗಾಗಲೇ ನಗರದಲ್ಲಿ ಶೇ ೭೦ ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ,ಇನ್ನುಳಿದ ೩೦ರಷ್ಟು ಜನರಿಗೆ ಶೀಘ್ರದಲ್ಲಿಯೆ ಲಸಿಕೆ ನೀಡುವ ಕಾರ್ಯ ಆಗಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿ,ನಗರಸಭೆಯಿಂದ ನಗರದಾದ್ಯಂತ ಜನರಿಗೆ ಕೊರೊನಾ ಲಸಿಕೆ ವಿತರಣೆಗೆ ಉತ್ತಮವಾಗಿ ಕಾರ್ಯ ಮಾಡುತ್ತಿದ್ದು ಅದು ಹೀಗೆಯೆ ಮುಂದುವರೆಯಬೇಕೆಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ನಗರಸಭೆ ಅಧ್ಯಕ್ಷರಾದ ಸುಜಾತಾ ವ್ಹಿ.ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್,ನಗರ ಯೋಜನಾ ನಿರ್ದೇಶ ಷಾಲಂ ಹುಸೇನ್,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಸದಸ್ಯರಾದ ಮಾನಪ್ಪ ಚಳ್ಳಿಗಿಡ,ಶಿವಕುಮಾರ ಕಟ್ಟಿಮನಿ,ವಿಷ್ಣು ಗುತ್ತೇದಾರ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಜೆಇ ಶಾಂತಪ್ಪ,ಸುರೇಶ ಶೆಟ್ಟಿ,ಶಿವಪುತ್ರ ಸೇರಿದಂತೆ ಅನೇಕರಿದ್ದರು.ಇದೇ ಸಂದರ್ಭದಲ್ಲಿ ಕಲಾ ತಂಡದಿಂದ ಕೊರೊನಾ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು.