ಆಳಂದ: ತಾಲೂಕಿನ ಕೋರಳ್ಳಿ ಗ್ರಾಮದ ಹತ್ತಿರ ಇರುವ ಸರ್ಕಾರಿ ಗೈರಾಣ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ೧೦ ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ಅಮರ್ಜಾ ಅಣೆಕಟ್ಟಿಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಅಮರ್ಜಾ ಅಣೆಕಟ್ಟಿನಿಂದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಿದೆ ಅಲ್ಲದೇ ಆಳಂದ ಪಟ್ಟಣಕ್ಕೆ ಕುಡಿಯುವ ನೀರು ಲಭ್ಯವಾಗಿದೆ ಈಗ ಬಂದಿರುವ ಮಳೆ ನೋಡಿದರೇ ಆಳಂದ ಪಟ್ಟಣಕ್ಕೆ ೨-೩ ವರ್ಷ ಕುಡಿಯುವ ನೀರಿನ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಈ ಸಲ ಅತೀ ಹೆಚ್ಚು ಮಳೆಯಾಗಿರುವುದರಿಂದ ಅತೀವೃಷ್ಟಿಯೂ ಆಗಿದೆ ಇದರಿಂದ ಬೆಳೆಗಳು ಹಾಳಾಗಿವೆ ಹೀಗಾಗಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಮರ್ಜಾ ಡ್ಯಾಂ ನಿರ್ಮಾಣ ಮಾಡುವಲ್ಲಿ ಆಳಂದದ ಎ ವಿ ಪಾಟೀಲ ಮತ್ತು ಕೊರಳ್ಳಿಯ ಅಣ್ಣಾರಾವ ಪಾಟೀಲ ಅವರ ಪಾತ್ರ ಮಹತ್ವದ್ದಾಗಿದೆ ಅವರಿಬ್ಬರೂ ಸದಾಕಾಲ ಪ್ರಾತ:ಸ್ಮರಣೀಯರಾಗಿರುತ್ತಾರೆ. ಕೆಲವು ಕೋಟಿಗಳಲ್ಲಿ ಆರಂಭವಾದ ಯೋಜನೆ ಇಲ್ಲಿಯವರೆಗೆ ಸಾವಿರಾರು ಕೋಟಿ ರೂ. ಖರ್ಚು ಕಂಡು ರೈತರಿಗೆ ವರದಾನವಾಗಿದೆ. ಅತೀ ಹೆಚ್ಚು ಕೆರೆಗಳು ನಿರ್ಮಾಣವಾಗುವುದರಿಂದ ನೀರು ಹಿಡಿದಿಟ್ಟಕೊಳ್ಳಬಹುದು ಅಲ್ಲದೇ ಮಣ್ಣಿನ ಫಲವತ್ತತೆಯು ಉಳಿಸಿಕೊಳ್ಳಬಹುದು ಎಂದರು.
ತಾಲೂಕಿನ ಕವಲಗಾ, ವಳವಂಡವಾಡಿ, ಕಡಗಂಚಿ, ನಿಂಬರ್ಗಾ, ತಡಕಲ ಗ್ರಾಮಗಳಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋತನ ಹಿಪ್ಪರ್ಗಾ ಗ್ರಾಮದಲ್ಲಿನ ಕೆರೆಯ ನಿರ್ಮಾಣಕ್ಕಾಗಿ ಭೂಮಿ ನೀಡಿದ ರೈತರಿಗೆ ಸರ್ಕಾರದಿಂದ ಈಗಾಗಲೇ ಪರಿಹಾರ ಒದಗಿಸಲಾಗಿದೆ ಅಲ್ಲದೇ ಕೆರೆಯ ಕಾಮಗಾರಿಯೂ ಪ್ರಗತಿಯ ಕೊನೆಯ ಹಂತದಲ್ಲಿದೆ. ತಾಲೂಕಿನಲ್ಲಿ ಬಾಕಿ ಉಳಿದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ತೆಗೆದುಕೊಂಡು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಮಾತನಾಡಿದರು. ಭೂಸನೂರಿನ ಬಸವಲಿಂಗ ಶಿವಾಚಾರ್ಯರು, ಆಳಂದನ ಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಮುಖಂಡರಾದ ಹಣಮಂತರಾವ ಮಲಾಜಿ, ಗುರುಶಾಂತ ಪಾಟೀಲ ನಿಂಬಾಳ, ಕೆಕೆಆರ್ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಎಪಿಎಂಸಿ ಮಾಜಿ ಅಧ್ಯಕ್ಷ ಅಣ್ಣಾರಾವ ಪಾಟೀಲ ಕವಲಗಾ, ಅನಂತರಾವ ಸಾಹು, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಸಾಹು, ಧುತ್ತರಗಾಂವ ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ ಮಂಗಾಣೆ, ಶಿವಪುತ್ರಪ್ಪ ಬೆಳ್ಳೆ, ಮಲ್ಲಿಕಾರ್ಜುನ ಕಂದಗೂಳೆ, ರಮ್ಮು ಅನ್ಸಾರಿ, ಮಹಿಬೂಬ್ ಆಳಂದ, ನೀರಾವರಿ ಇಲಾಖೆಯ ಅಧಿಕಾರಿಗಳಾದ ಸಂತೋಷಕುಮಾರ ಸಜ್ಜನ, ಶರಣಬಸಪ್ಪ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ, ಕೃಷಿ ಇಲಾಖೆಯ ಶರಣಗೌಡ ಪಾಟೀಲ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.