ಶಹಾಬಾದ:ಮಕ್ಕಳೆಂದರೆ ಕೇವಲ ಪೋಷಕರಿಗೆ ಮಾತ್ರವಲ್ಲ ಮೀಸಲಾಗಿರದೆ ಇಡೀ ನಾಗರಿಕ ಸಮಾಜಕ್ಕೆ ಸೇರಿದವರು. ಮಕ್ಕಳ ಬಗ್ಗೆ ಹೆತ್ತವರಿಗಿರುವ ಜವಾಬ್ದಾರಿ ಸಮಾಜ, ಶಿಕ್ಷಕ ವೃಂದ, ಹಿರಿಯ ನಾಗರಿಕರಿಗೂ ಇದೆ ಎಂದು ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು.
ಅವರು ರವಿವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಚಾಚಾ ನೆಹರು ಅವರ ಜಯಂತಿ ನಿಮಿತ್ತ ಆಯೋಜಿಸಲಾದ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೆಹರೂ ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ. ಅಲ್ಲದೆ ಅವರು ಮಕ್ಕಳನ್ನು ಗುಲಾಬಿ ಹೂವಿಗೆ ಹೋಲಿಸಿದ್ದಾರೆ. ಮಕ್ಕಳ ಮನಸ್ಸು ಗುಲಾಬಿ ಹೂವಿನಷ್ಟೇ ಸುಂದರವಾಗಿರುತ್ತದೆ. ಅಂತೆಯೇ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ. ನೆಹರು ಅವರ ಹಲವಾರು ಸಾಧನೆಗಳು ಮಕ್ಕಳಿಗೆ ಸ್ಪೂರ್ತಿ ನೀಡಬೇಕು ಎಂದು ಹೇಳಿದರು.
ಮುಖ್ಯಗುರುಮಾತೆ ಅನಿತಾ ಶರ್ಮಾ ಮಾತನಾಡಿ,ಆದರ್ಶ ಪುರುಷರ ತತ್ವಗಳು, ವೈಚಾರಿಕ ವಿಚಾರಗಳನ್ನು ಎಲ್ಲರಿಗೂ ದಾರಿದೀಪವಾಗಬೇಕಾದರೆ, ಜೀವನದಲ್ಲಿ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಬದಲಾವಣೆ ನಿಸರ್ಗದ ನಿಯಮ.ಆ ಬದಲಾವಣೆ ಸಮಾಜಕ್ಕೆ ವಿರುದ್ಧವಾಗಿರದೇ ಒಳಿತಾಗುವಂತಿರಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ದಮಯಂತಿ ಸೂರ್ಯವಂಶಿ, ಅನೀಲಕುಮಾರ ಕುಲಕರ್ಣಿ, ವಸಂತ ಪಾಟೀಲ, ಸಾಯಿಬಣ್ಣ ಗುಡ್ಲಾ, ಶಿಕ್ಷಕಿಯರಾದ ಗೀತಾ ಸಿಪ್ಪಿ, ಸಂಗೀತಾ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.