ಕಲಬುರಗಿ: ಜನ್ಮದಿನಕ್ಕೆ ಗಿಫ್ಟ್ ಕೊಡುವುದು ಸರ್ವೆ ಸಾಮಾನ್ಯ, ಆದರೆ ಇಲ್ಲೊಂದು ಕುಟುಂಬವು ತಮ್ಮ ಮೊಮ್ಮಗಳ ಪ್ರಥಮ ವರ್ಷದ ಹುಟ್ಟುಹಬ್ಬಕ್ಕೆ ನೇತ್ರದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಸೇಡಂ ಪಟ್ಟಣದ ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಅಂಬಣ್ಣ ತಳವಾರ ಹಾಗೂ ಸೇಡಂ ತಾಲೂಕಿನ ಕೋಡ್ಲಾದ ಪ್ರೌಢ ಶಾಲಾ ಶಿಕ್ಷಕಿ ವಿಜಯಲಕ್ಷ್ಮೀ ಅಂಬಣ್ಣ ತಳವಾರ ಅವರ ಮೊಮ್ಮಗಳ ಪ್ರಥಮ ವರ್ಷದ ಜನ್ಮದಿನದ ಅಂಗವಾಗಿ ಕುಟುಂಬದ ಐವರು ಸದಸ್ಯರು ನೇತ್ರದಾನ ಮಾಡಿದ್ದಾರೆ.
ಪ್ರದೀಪಕುಮಾರ, ಪ್ರತೀಕ್ಷಾ ದಂಪತಿಯ ಮಗಳಾದ ಮನಸ್ವಿನಿಯ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ನೇತ್ರದಾನ ಮಾಡಿ ಪರೋಪಕಾರ ಮೆರೆದಿದ್ದಾರೆ. ಈ ಕುಟುಂಬದಲ್ಲಿ ಒಟ್ಟು ಆರು ಜನರ ಸದಸ್ಯರ ಪೈಕಿ ಅಬಕಾರಿ ಇಲಾಖೆಯ ಉಪನಿರೀಕ್ಷಕಿ ಕು. ರಮಾ, ಇವರ ಪಾಲಕರಾದ ಅಂಬಣ್ಣ, ವಿಜಯಲಕ್ಷ್ಮೀ, ಪ್ರದೀಪಕುಮಾರ, ಪ್ರತೀಕ್ಷಾ ಎಂಬುವವರು ಹೆಚ್ಕೆಇ ಸೊಸೈಟಿಯ ಬಸವೇಶ್ವರ ಆಸ್ಪತ್ರೆಯಲ್ಲಿ ನೇತ್ರ ವಿಭಾಗದಲ್ಲಿ ನೇತ್ರದಾನದ ಬಗ್ಗೆ ಹೆಸರು ನೋಂದಾಯಿಸಿದ್ದಾರೆ.
ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದಲ್ಲದೆ, ದೇಹದ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿದೆ. ಆದರೆ ಮನೆಯಲ್ಲಿ ಶಿಕ್ಷಿತರು ಇರುವುದರಿಂದ ನೇತ್ರದಾನ ಮಹತ್ವದ ಬಗ್ಗೆ ಅರಿವಿನಿಂದ ಇದು ಸಾಧ್ಯವಾಯಿತು ಎಂದು ನಿವೃತ್ತ ನೌಕರ ಸೂರ್ಯಕಾಂತ ಗುಡ್ಡೊಡಗಿ ತಿಳಿಸಿದ್ದಾರೆ