ಶಹಾಬಾದ: ನಗರದಲ್ಲಿ ಬುಧವಾರ ನಗರಸಭೆಯಿಂದ ಬಸವೇಶ್ವರ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮತ್ತೆ ಮಾಡಿರುವುದಕ್ಕೆ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಸವೇಶ್ವರ ಮೂರ್ತಿ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈ ಹಿಂದೆ ಆದ ಶಂಕುಸ್ಥಾಪನೆಯನ್ನು ಮರೆಮಾಚಲು ಮತ್ತೊಮ್ಮೆ ಶಂಕುಸ್ಥಾಪನೆ ಮಾಡಿರುವುದು ಮಾತ್ರ ದುರ್ದೈವ. ದಿ.೩೦-೦೫-೨೦೧೬ ರಂದು ಬಸವೇಶ್ವರ ಪುತ್ಥಳಿಯನ್ನು ಆಗಿನ ಶಾಸಕರಾಗಿದ್ದ ಜಿ.ರಾಮಕೃಷ್ಣ ಶಂಕುಸ್ಥಾಪನೆ ಮಾಡಿದ್ದರು.ಆದರೆ ಮತ್ತೆ ಮಾಡಿರುವುದು ಯಾವ ಪುರುಷಾರ್ಥಕ್ಕಾಗಿ ಎಂದರು.
ಅಭಿವೃದ್ಧಿ ಮಾಡುವ ಮನಸ್ಸಿದ್ದರೇ ಅನುದಾನ ತೆಗೆದುಕೊಂಡು ಬಂದು ಶಂಕುಸ್ಥಾಪನೆ ಮಾಡಿ.ಅದನ್ನು ಬಿಟ್ಟು ಮೊದಲು ಮಾಡಿದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮತ್ತೆ ಮಾಡಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ.ಅಲ್ಲದೇ ಜನರಿಗೆ ದಾರಿ ತಪ್ಪಿಸುವ ಹಾಗೂ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದರು.
ರಾಜಕೀಯ ಮಾಡುವುದಿದ್ದರೇ ಅಭಿವೃದ್ಧಿಯ ರಾಜಕರಣ ಮಾಡಬೇಕೆ ವಿನಃ ಈ ರೀತಿ ಮಾಡುವುದು ಸರಿಯಲ್ಲ ಎಂದರು. ಈ ಹಿಂದೆ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ನೀಡಿದ ಎಸ್ಸಿಪಿಟಿಎಸ್ಪಿ, ನಗರೋತ್ಥಾನ ಅನುದಾನದ ಕಾಮಗಾರಿಗಳು ಇಂದು ನಡೆಯುತ್ತಿದೆ. ಇಲ್ಲಿಯವರೆಗೆ ಶಾಸಕ ಬಸವರಾಜ ಮತ್ತಿಮಡು ಯಾವುದೇ ಅನುದಾನವೂ ತಂದಿಲ್ಲ.ಆದರೆ ಅದನ್ನು ನಾವೇ ತಂದಿದ್ದು ಎಂದು ಬಿಂಬಿಸುತ್ತಿರುವುದು ಮಾತ್ರ ದುರಂತ.ಅಡಿಗಲ್ಲು ನಿರ್ಮಾಣ ಮಾಡಿ, ಮೂರ್ತಿ ಅನಾವರಣ ಮಾಡಿ ಹೆಸರು ಹಾಕಿಕೊಳ್ಳಲಿ.ಅದನ್ನು ಬಿಟ್ಟು ಈಗಾಗಲೇ ಮಾಡಿದ ಶಂಕಸ್ಥಾಪನೆಯನ್ನು ಮತ್ತೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದರು.