ಶಹಾಬಾದ:ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರವಿವಾರ ನಗರದ ಶಾಸಕರ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎಸ್ಸಿ/ಎಸ್ಟಿ ಬಡಾವಣೆಗಳಲ್ಲಿ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಲಕ್ಷಾಂತರ ಅನುದಾನ ಹಣ ದುರ್ಬಳಕೆ ಮಾಡಲಾಗಿದೆ.ಅಲ್ಲಿ ಮಾಡಿರುವ ಎಲ್ಲಾ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ.ಪ್ರಗತಿ ಕಾಲೋನಿಯ ಮುಖ್ಯ ಉದ್ದೆಶಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ.ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್ಸಿ/ಎಸ್ಟಿ ಬಡಾವಣೆಯಲ್ಲಿ ಕಾಮಗಾರಿಗಳನ್ನು ಮಾಡದೇ ಬೇರೆ ಬಡಾವಣೆಗಳಲ್ಲಿ ಕೆಲಸ ಮಾಡಿಸಿದ್ದಾರೆ.ಆದ್ದರಿಂದ ಎಸ್ಸಿ/ಎಸ್ಟಿ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕೆಂದು ಎಂದು ಒತ್ತಾಯಿಸಿದರು.
ನಗರದಿಂದ ಹೊರಡುವ ಎಲ್ಲಾ ಪ್ರಮುಖ ರಸ್ತೆಗಳು ಡಾಂಬರೀಕರಣಗೊಳ್ಳುವ ಮುಂಚೆಯೇ ಕಳಪೆ ಕಾಮಗಾರಿಯಿಂದ ಹಳ್ಳ ಹಿಡಿದಿವೆ. ನಗರದ ವಾಡಿ ವೃತ್ತದಿಂದ ಕನಕದಾಸ ವೃತ್ತ ಹಾಗೂ ತೊನಸನಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ.ಈಗಾಗಲೇ ರಸ್ತೆ ಹಳ್ಳಹಿಡಿದಿದೆ.ವಾಡಿ ವೃತ್ತದ ಸ್ವಾಗತ ಕಮಾನ್ ಸಮೀಪದಿಂದ ರೇಲ್ವೆ ಸೇತುವೆವರೆಗಿನ ಸುಮಾರು 300 ಮೀ. ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 76 ಲಕ್ಷ ರೂ. ಅನುದಾನ ಒದಗಿಸಲಾಗಿದೆ.
ಗುತ್ತಿಗೆದಾರ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಬಿಲ್ ಎತ್ತಿ ಹಾಕಲು ಮುಂದಾಗಿದ್ದಾನೆ. ಅಲ್ಲದೇನಗರಸಭೆಯಿಂದ ನಗರೋತ್ಥಾನ ಯೋಜನೆಯ 3 ಹಂತದಲ್ಲಿ ಸುಮಾರು 4ಕೋಟಿ 17ಲಕ್ಷ ರೂ. ಅನುದಾನದಲ್ಲಿ ಬಸವೇಶ್ವರ ವೃತ್ತದಿಂದ ಕನಕದಾಸ ವೃತ್ತದವರೆಗಿನ ರಸ್ತೆ ಹಾಗೂಲೋಕೋಪಯೋಗಿ ಇಲಾಖೆಯಿಂದ ಕನಕದಾಸ ವೃತ್ತದಿಂದ ತೊನಸನಹಳ್ಳಿ(ಎಸ್) ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಗೆ ಕೋಟಿಗಟ್ಟಲೇ ಹಣವನ್ನು ಒದಗಿಸಲಾಗಿದೆ.
ಇದು ಕೂಡ ಕಳಪೆ ಮಟ್ಟದ ಕಾಮಗಾರಿಯಿಂದ ಸಂಪೂರ್ಣ ತಗ್ಗುಗಳು ಬಿದ್ದಿವೆ. ಇಷ್ಟೆಲ್ಲಾ ಕಳಪೆ ಮಟ್ಟದ ಕಾಮಗಾರಿಗಳು ನಡೆಯುತ್ತಿದ್ದರೂ, ಯಾರೂ ಕ್ರಮಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಶಹಾಬಾದ ನಗರದ ಜಿಇ ಹಾಗೂ ಜೆಪಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಘೋಷಿತ ತಾಲೂಕಾ ಕೇಂದ್ರದಲ್ಲಿ ತಾಲೂಕಾ ಕಚೇರಿಗಳನ್ನು ಪ್ರಾರಂಭ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕರಾದಸಂಸ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್, ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ತಾಲೂಕಾ ಸಂ.ಸಂಚಾಲಕರಾದ ತಿಪ್ಪಣ್ಣ ಧನ್ನೇಕರ್, ಮಹಾದೇವ ಮೇತ್ರೆ, ಹೋಬಳಿ ಸಂಚಾಲಕ ಲಕ್ಷ್ಮಣ ಕೊಲ್ಲೂರ್,ಸಂತೋಷ ಬಂಡೇರ,ಅಮೃತ ಮೇತ್ರೆ, ಮಲ್ಲಿಕಾರ್ಜುನ ಜಲಂಧರ್, ನಾಗರಾಜ ಸಿಂಘೆ, ರಾಮಕುಮಾರ ಸಿಂಘೆ,ಶರಣಬಸಪ್ಪ ಮುತ್ತಗಿ,ಈರಯ್ಯಸ್ವಾಮಿ ತರನಳ್ಳಿ ಸೇರಿದಂತೆ ಅನೇಕರು ಇದ್ದರು.
ಹಕ್ಕಿಗಾಗಿ ಹೋರಾಟ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರಿಗೂ ಕೊಟ್ಟಿರುವ ಹಕ್ಕು.ಆದರೆ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಪ್ರತಿಭಟನೆ ಹತ್ತಿಕ್ಕಲು ನಾನಾ ಕಸರತ್ತು ಮಾಡಿದ್ದಾರೆ.ಶಾಸಕರ ಕಚೇರಿಯ ಮುಂದೆ ಪ್ರತಿಭಟನೆ ಮಾಡದೇ ಕಲಬುರಗಿಗೆ ಹೋಗಿ ಮಾಡಿ ಎಂದು ಒತ್ತಾಯ ಮಾಡುತ್ತಿರುವುದು ನೋಡಿದರೇ ಅವರಿಗೆ ಯಾರೋ ಒತ್ತಡಹಾಕುತ್ತಿದ್ದಾರೆ ಅನಿಸುತ್ತಿದೆ.ಯಾರೇ ಏನೇ ಮಾಡಿದರೂ ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೆವೆ.ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಯಾವ ಅಧಿಕಾರವಿಲ್ಲ.ಈ ಕುರಿತು ಜಿಲ್ಲಾ ಎಸ್ಪಿ ಅವರಿಗೆ ದೂರು ನೀಡುತ್ತೆವೆ. – ಕೃಷ್ಣಪ್ಪ ಕರಣಿಕ್ ಜಿಲ್ಲಾ ಮುಖಂಡ ಕರಾದಸಂಸ.