ಕಲಬುರಗಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರ ಐತಿಹಾಸಿಕವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು, ಸೇಡಂ ಮತಕ್ಷೇತ್ರದ ಶಾಸಕರಾದ ರಾಜಕುಮಾರ ಪಾಟೀಲ್ ತಿಳಿಸಿದ್ದಾರೆ.
ನ್ಯಾ.ನಾಗಮೋಹನ್ ದಾಸ್ ವರದಿ ಪ್ರಕಾರ ಎಸ್.ಸಿ ಸಮುದಾಯಕ್ಕೆ ಶೇ.15 ರಿಂದ ಶೇ.17 ಹಾಗೂ ಎಸ್.ಟಿ ಸಮುದಾಯಕ್ಕೆ ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸುವ ಮುಖಾಂತರ ಸಮುದಾಯಕ್ಕೆ ಸ್ಪಂದಿಸಿದಂತಾಗಿದೆ ಎಂದಿದ್ದಾರೆ.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ ಎಂದು ಮನಗಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬದಲಾವಣೆ ತರಲು ಸಮಾನ ಅವಕಾಶಗಳನ್ನು ನೀಡಿದಾಗ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರು ಮೇಲೆ ಬರುತ್ತಾರೆ. ಆ ಅವಕಾಶವೇ ಇಲ್ಲದಿದ್ದರೆ, ತುಳಿತಕ್ಕೆ ಒಳಪಟ್ಟರೆ, ತಲೆಮಾರುಗಳು ಕಷ್ಟಪಡುವಂತಾದರೆ ಎಂದಿಗೂ ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯಲ್ಲಿ ಹೆಚ್ಚಳ ಮಾಡುವ ಅವಕಾಶ ಹಾಗೂ ಸಂಕಲ್ಪವನ್ನು ನೆರವೇರಿಸಿರುವುದು ಸಾಮಾನ್ಯವಾದುದ್ದಲ್ಲ ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಸಮಾನ ಅವಕಾಶ, ಗೌರವ, ಮತ್ತು ಕಾಯಕ ನಿಷ್ಠೆಯ ಬದುಕನ್ನು ಬಸವಣ್ಣ ಸಾರಿದ್ದಾರೆ. ಧರ್ಮದಲ್ಲಿ ಸಮಾನತೆ ಮಾತ್ರವಲ್ಲ, ಲಿಂಗ ಬೇಧ ಮರೆತು ಅಲ್ಲಿಯೂ ಸಮಾನತೆ ತರುವ ಅಗತ್ಯವಿದೆ. ಕೌಟುಂಬಿಕ ಸಮಾನತೆಯಿಂದ ಹಿಡಿದು ಮಾನವಕುಲಕ್ಕೆ ಸಮಾನತೆ ತರಬೇಕಿದೆ. ವೃತ್ತಿ ಗೌರವದ ಜೊತೆಗೆ ಮೇಲು ಕೀಳು ಇಲ್ಲದಿರುವುದು ಅಗತ್ಯ. ಜ್ಞಾನಕ್ಕೆ ಜಾತಿ, ಧರ್ಮ ಇಲ್ಲ. ಕಾಯಕ ಸಮುದಾಯಗಳು ತುಳಿತಕ್ಕೆ ಒಳಗಾದ ಸಂದರ್ಭದಲ್ಲಿ ಬಸವಣ್ಣ ಕೈಗೊಂಡ ವೈಚಾರಿಕ ಕ್ರಾಂತಿ, ಸಾಮಾಜಿಕ ಕ್ರಾಂತಿಯಾಗಿ ಬದಲಾಯಿತು. ತನ್ನನ್ನು ತಾನೇ ಇದಕ್ಕೆ ಅರ್ಪಿಸಿಕೊಳ್ಳುವ ಪ್ರಸಂಗ ಬಂದರೂ ಹಿಂದೆ ಮುಂದೆ ನೋಡಲಿಲ್ಲ. ಸಮಾಜದಲ್ಲಿ ಮತ್ತೊಮ್ಮೆ ಸಂಘರ್ಷ ದೂರ ಮಾಡಿ ಸಮಾನತೆ ತರುವ ಕಾಲ ಈ ಮೂಲಕ ಕೂಡಿ ಬಂದಿದೆ ಎಂದು ತೇಲ್ಕೂರ ವಿವರಣೆ ನೀಡಿದ್ದಾರೆ.