ಸುರಪುರ: ರಾಜ್ಯದಲ್ಲಿನ ಎಲ್ಲಾ ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇದೇ 18ನೇ ತಾರೀಖು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಸ್ಲಾಂ ಭಾಷಾ ಮಾಸ್ಟರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ನಮ್ಮ ಗುತ್ತಿಗೆದಾರರು ಇಂದು ಅನೇಕ ಸಮಸ್ಯೆಗಳನ್ನು ಹೆದರಿಸುವಂತಾಗಿದೆ.ಜಿಎಸ್ಟಿ 12 ಪ್ರತಿಶತ ಇದ್ದಿದ್ದು 18ಕ್ಕೆ ಏರಿಸಿದ್ದಾರೆ.ಇನ್ನು ತುಂಡು ಗುತ್ತಿಗೆ ಪದ್ಧತಿ ರದ್ದು ಮಾಡಿ ಪ್ಯಾಕೇಜ್ ಟೆಂಡರ್ ಮಾಡಿ ಕೆಲವೇ ಕೆಲವು ಗುತ್ತಿಗೆದಾರರಿಗೆ ಕೆಲಸವಿದ್ದು ಬಹುಪಾಲು ಗುತ್ತಿಗೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಾಜ್ಯ ಸರಕಾರ ಪ್ಯಾಕೇಜ್ ಟೆಂಡರ್ ನಡೆಸದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದೆ,ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವರಿಕೆ ಮಾಡಲಾಗುವುದು. ಅಲ್ಲದೆ ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಅವರಿಗೆ ಸರಕಾರ ನೀಡುತ್ತಿರುವ ಕಿರಕುಳವನ್ನು ಖಂಡಿಸಿ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ಗುತ್ತಿಗೆದಾರರು ಹೋರಾಟದಲ್ಲಿ ಭಾಗವಹಿಸುವಂತೆ ವಿನಂತಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಕಾಳಪ್ಪ ಬಡಿಗೇರ,ಮುಖಂಡರಾದ ದಾವಲಸಾಬ್ ಬೊಮ್ಮನಹಳ್ಳಿ,ಮಾನಪ್ಪ ಕವಲ್ದಾರ್ ಬಾದ್ಯಾಪುರ,ಗೌತಮ್ ಬಡಿಗೇರ ವಾಗಣಗೇರ ಉಪಸ್ಥಿತರಿದ್ದರು.