ಸುರಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ತಾಲೂಕು ಆಡಳಿತ,ತಾಲೂಕು ಪಂಚಾಯತ್,ತಾಲೂಕು ಕಾನೂನು ಸೇವಾ ಸಮಿತಿ,ಯುವಜನ ಸೇವೆ ಸಬಲೀಕರಣ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಾದಗಿರಿ,ಮಕ್ಕಳ ಸಹಾಯವಾಣಿ,ಶಿಶು ಅಭಿವೃಧ್ಧಿ ಯೋಜನೆ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾನೂನು ಅರಿವು ನೆರವು ಜೊತೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಇಲ್ಲಿಯ ನ್ಯಾಯಾಲಯದ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಮಾತನಾಡಿ,ಇಂದು ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸರಿ ಸಮಾನವಾದ ಅವಕಾಶ ದೊರೆಯುತ್ತಿದೆ,ಇದರಿಂದ ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರು.ಅಲ್ಲದೆ ಮಹಿಳೆಯರಿಗೆ ಕಾನೂನಿನಲ್ಲೂ ಅನೇಕ ಅವಕಾಶಗಳಿದ್ದು ಅವುಗಳನ್ನು ಮಹಿಳೆಯರು ತಿಳಿದುಕೊಂಡು ಉನ್ನತಿ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಾರಾಗಿ ಭಾಗವಹಿಸಿದ್ದ ನ್ಯಾಯವಾದಿ ಶ್ರೀದೇವಿ ಪಾಟೀಲ್ ಅವರು,ಮಹಿಳೆಯರಿಗೆ ಕಾನೂನಿನ ನೆರವು ಕುರಿತು ವಿವರಿಸಿದರು.ಅಲ್ಲದೆ ಎಲ್ಲಾ ಮಹಿಳೆಯರು ಸುಶಿಕ್ಷಿತರಾಗಿ ಎಲ್ಲಾ ಕಾನೂನುಗಳನ್ನು ತಿಳಿದುಕೊಂಡು ನಮಗಾಗಿ ಇರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಂದಣ್ಣ ಬಾಕ್ಲಿ ಮಾತನಾಡಿದರು, ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಅನಿಲ ಕಾಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು,ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ದಿವಾಣಿ ನ್ಯಾಯಾಧೀಶ ಮಾರುತಿ ಕೆ,ತಾಲೂಕು ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಮಂಜುನಾಥ ಹುದ್ದಾರ,ನ್ಯಾಯವಾದಿಗಳ ಸಂಘದ ತಾಲೂಕು ಉಪಾಧ್ಯಕ್ಷೆ ಸಂತೋಷಕುಮಾರಿ,ಅರುಂಧತಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಶರಣಪ್ಪ ಅನಸೂರು ವೇದಿಕೆಯಲ್ಲಿದ್ದರು.
ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ನೃತ್ಯ ಕಲಾ ಸಂಸ್ಥೆಯ ಮಕ್ಕಳ ಭರತ ನಾಟ್ಯ ಎಲ್ಲರ ಗಮನ ಸೆಳೆಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಎಲ್ಲಾ ಮಹಿಳಾ ಮೇಲ್ವಿಚಾರಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ ಸಂಜೆಯ ವರೆಗೂ ಎಲ್ಲಾ ಮೇಲ್ವಿಚಾರಕಿಯರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿವಿಧ ಸಿನೆಮಾ ಹಾಡುಗಳಿಗೆ ಭರ್ಜರಿ ನೃತ್ಯ ಮಾಡಿ ಆನಂದಿಸಿದರು.ಕಾರ್ಯಕ್ರಮದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿರು ಭಾಗವಹಿಸಿದ್ದರು.ಮೇಲ್ವಿಚಾರಕಿ ಸಾವಿತ್ರಿ ಗಾಳಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು.