ಕಲಬುರಗಿ: ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ನ ರೇವೂನಾಯಕ ಬೆಳಮಗಿ ಹಾಗೂ ಬಿಜೆಪಿಯ ಬಸವರಾಜ ಮತ್ತಿಮಡು ಅವರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗ ಕಾರ್ಯಕರ್ತರೊಂದಿಗೆ ಆಗಮಿಸಿ ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಉರಿಯುವ ರಣಬಿಸಿಲನ್ನೂ ಲೆಕ್ಕಿಸದೆ ಗ್ರಾಮೀಣ ಕ್ಷೇತ್ರದ ನಾನಾ ಕಡೆಯಿಂದ ಆಗಮಿಸಿದ ಆಯಾ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮೂಲಕ ಜಗತ್ ವೃತ್ತದವರೆಗೆ ಆಗಮಿಸಿ ಸಾರ್ವಜನಿಕ ಸಭೆ ನಡೆಸಿ ತಮ್ಮ ಗೆಲವಿಗೆ ಶ್ರಮಿಸುಂತೆ ಮನವಿ ಮಾಡಿದರು.
ಪಕ್ಷದ ಗೆಲವಿಗೆ ಶ್ರಮಿಸಿದರೆ ಮುಂದಿನ ಐದು ವರ್ಷಗಳವರೆಗೆ ನಿಮ್ಮ ಸೇವಕರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಆಯಾ ಪಕ್ಷದ ಅಭ್ಯರ್ಥಿಗಳು ಜನರಿಗೆ ಮನವಿ ಮಾಡಿಕೊಳ್ಳುವುದು ಕಂಡು ಬಂದಿತು.
ತಮ್ಮ ಅಭ್ಯರ್ಥಿಗಳನ್ನು ಮೆರವಣಿಗೆಯುದ್ದಕ್ಕೂ ತಮ್ಮ ಮೈ ಮೇಲೆ ಎತ್ತಿಕೊಂಡು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದರು. ಬೆಳಮಗಿ ಹಾಗೂ ಮತ್ತಿಮಡು ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪರ ಜಯಘೋಷಗಳು ಮೊಳಗಿದವು.
ನಂತರ ಸಹಾಯಕ ಆಯುಕ್ತರ ಬಳಿ ಪಕ್ಷದ ಎಲ್ಲ ವರ್ಗ ಪ್ರತಿನಿಧಿಸುವ ಪ್ರಮುಖ ವ್ಯಕ್ತಿಗಳನ್ನು ಕರೆ ತಂದು ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.