ಕಲಬುರಗಿ: ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ವಚನಗಳಿಗೆ ಇದೆ. ಕಾಯಕ, ದಾಸೋಹ, ಸಮಾನತೆ, ವೈಚಾರಿಕತೆ, ಮಾನವೀಯತೆ ಮುಂತಾದ ತತ್ವಗಳನ್ನು ವಚನಗಳು ತಿಳಿಸುತ್ತವೆ. ಇಂಥ ಅಮೂಲ್ಯ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು. ಅವರ ಮನಸ್ಸು ಹದವಾದ ಭೂಮಿ ಇದ್ದಂತೆ. ಅಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕøತಿಯನ್ನು ಕಲಿಸಬೇಕು. ಆಗ ಮಾತ್ರ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗುತ್ತಾರೆ ಎಂದು ಹಿರಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ `ಬಸವ ಉತ್ಸವ-2023′ ದ ಪ್ರಯುಕ್ತ ನಗರದ ಕನ್ನಡ ಭವನದ ಶ್ರೀ ಬಾಪುಗೌಡ ದರ್ಶನಾಪೂರ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ ವಚನಾಧಾರಿತ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಚನಗಳು ಬದುಕಿನ ದಾರಿ ದೀಪವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ವಚನ ಸಾರ ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಸ್ತುತ ಸನ್ನಿವೇಶದಲ್ಲಿ ಕೊಲೆ, ಸುಲಿಗೆ, ದರೊಡೆ, ಭ್ರಷ್ಟಾಚಾರ, ಮೋಸ, ಅಪ್ರಾಮಾಣಿಕತೆಯಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಈ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸಿಕೊಳ್ಳಬೇಕಾದರೆ ವಿಶ್ವಗುರು ಬಸವಣ್ಣನವರ ವಚನಗಳನ್ನು ಮೈಗೂಡಿಸಿಕೊಳ್ಳಬೇಕಿರುವುದು ಅವಶ್ಯಕವಾಗಿದೆ. ಆ ಮೂಲಕ ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಿ ಸಮಾಜದಲ್ಲಿ ಶಾಶ್ವತ ನೆಮ್ಮದಿ ನೆಲೆಸಲು ಸಾಧ್ಯವಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ, ಕಾರ್ಯದರ್ಶಿ ಶಿಲ್ಪಾ ಜೋಶಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಶರಣಬಸಪ್ಪ ನರೂಣಿ, ಎಸ್ ಎಂ ಪಟ್ಟಣಕರ್, ಹೆಚ್.ಎಸ್.ಬರಗಾಲಿ, ವಿಶ್ವನಾಥ ಯಳಮೇಲಿ, ಸಿದ್ಧರಾಮ ಹಂಚನಾಳ, ಕವಿತಾ ಕವಳೆ, ಸಾಕ್ಷಿ ಸತ್ಯಂಪೇಟೆ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯತ ಪರಿಷತ್ತು ಇದೇ ಮೊದಲ ಬಾರಿಗೆ ಆಯೋಜಿಸಿದ `ಬಸವ ಉತ್ಸವ-2023′ ದ ಪ್ರಯುಕ್ತ ನಡೆಸಲಾದ ವಚನಾಧಾರಿತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಅನೇಕ ಮಹಿಳೆಯರು ಹಾಗೂ ಮಕ್ಕಳು ವಚನಾಧಾರಿತ ವಿವಿಧ ಸ್ಪರ್ಧೆಗಳಲ್ಲು ಉತ್ಸಾಹದಿಮದ ಪಾಲ್ಗೊಂಡಿದ್ದರು.