ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ’ ಕುರಿತು ಉಪನ್ಯಾಸ

0
116

ಕಲಬುರಗಿ: ಸಂವಿಧಾನದ ಮೂಲತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಶಿಕ್ಷಣದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು ಈ ಮುಂತಾದ ವಿಷಯಗಳ ಕುರಿತು ವಚನಕಾರರು ಅಂದೇ ಮಾತನಾಡಿದ್ದರು ಎಂದು ಹಿರಿಯ ಚಿಂತಕ ಬಸಣ್ಣಾ ಸಿಂಗೆ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ `ಬಸವ ಉತ್ಸವ-2023′ ದ ವಚನ ಸಾಂಸ್ಕøತಿಕ ಸಂಭ್ರಮದಲ್ಲಿ ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ’ದ ಕುರಿತು ಮಾತನಾಡಿದ ಅವರು, ಭಗವಾನ್ ಬುದ್ಧ ಮಾನವೀಯತೆಯ ಬೀಜ ಬಿತ್ತಿದ. ಮೊಳಕೆಯೊಡೆದ ಆ ಬೀಜವನ್ನು ಬಸವಣ್ಣ ಹೆಮ್ಮರವಾಗಿ ಬೆಳೆಸಿದರು. ಡಾ. ಅಂಬೇಡ್ಕರ್ ಅವರು ಹೆಮ್ಮರದ ಫಲವನ್ನು ಸಂವಿಧಾನದ ಮೂಲಕ ಕೊಟ್ಟರು ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

`ವಚನ ವೈಚಾರಿಕ ದರ್ಶನ’ ವಿಷಯದ ಕುರಿತು ಮಾತನಾಡಿದ ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ, ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿದ ಶರಣರು, ವೈಚಾರಿಕ ಬೀಜವನ್ನು ಬಿತ್ತಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ವಾಸ್ತವಕ್ಕೆ ಹತ್ತಿರವಾಗಿರುವ ಶರಣರ ವಚನಗಳು ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಎನ್ನುವಂತಿವೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಭಾರತೀಯ ಚರಿತ್ರೆಯಲ್ಲೇ ಧ್ವನಿ ಇಲ್ಲದವರಿಗೆ ಬಾಯಿ ಬಂದ ವಚನ ಕಾಲವನ್ನು ವೈಚಾರಿಕ ಕಾಲ ಎಂದೇ ಕರೆಯಬಹುದು. ಅಜ್ಞಾನ, ಅಂಧಕಾರದಲ್ಲಿ ದಿಕ್ಕು ಕಾಣದೇ ತೊಡಲಾಡುತ್ತಿದ್ದ ಜನರಿಗೆ ಸಮಾನತೆಯ ಮೂಲಕ ಜ್ಞಾನಜ್ಯೋತಿ ನೀಡಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಬದಲಾವಣೆಗೆ ಅವರು ನೀಡಿದ ಕೊಡುಗೆ ಮರೆಯುವಂತಿಲ್ಲ. ಕಾಯಕತತ್ವ ಮತ್ತು ಸಮಾನತೆಗಳನ್ನು ಈ ದೇಶಕ್ಕೆ ನೀಡಿದ ಕೊಡುಗೆ ಬಸವಣ್ಣನವರದ್ದು, ಅಂಥ ಮಾನವಕುಲದ ಪ್ರಥಮ ಉದ್ಧಾರಕರಾಗಿದ್ದ ಬಸವಣ್ಣನವರ ತತ್ವಾದರ್ಶಗಳನ್ನು ಇಂದು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಸಮಾರಂಭ ಉದ್ಘಾಟಿಸಿ, ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಜಾತೀಯತೆಯ ವಿರುದ್ಧ ಹೋರಾಡಿ ಸಮಾಜದಲ್ಲಿ ಸಮಾನತೆ ತರುವಂಥ ಬಸವಣ್ಣನವರ ಜೀವನ ಎಲ್ಲರಿಗೂ ಸ್ಫೂರ್ತಿ ಮತ್ತು ಮಾರ್ಗದರ್ಶನವಾಗಿದೆ ಎಂದರು.

ಹಿರಿಯ ಶರಣಜೀವಿ ಶರಣಬಸಪ್ಪ ಬಿ ಪಾಟೀಲ ಜಾವಳಿ ಅವರನ್ನು `ಬಸವಜ್ಯೋತಿ’ ಪುರಸ್ಕಾರವನ್ನು ನೀಡಿ ಸತ್ಕರಿಸಲಾಯಿತು.

ಡಾ. ಬಾಬುರಾವ ಶೇರಿಕಾರ, ಸಂತೋಷ ಪಾಟೀಲ, ಪೂರ್ಣಿಮಾ ಜಾನೆ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ಶರಣಬಸಪ್ಪ ನರೂಣಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಸಿದ್ಧರಾಮ ಹಂಚನಾಳ, ಸೋಮಶೇಖರಯ್ಯಾ ಹೊಸಮಠ, ಡಾ. ರೆಹಮಾನ್ ಪಟೇಲ್, ಶರಣಬಸಪ್ಪ ಕೋಬಾಳ, ಪ್ರಭು ಫುಲಾರಿ, ಗುರುಬಸಪ್ಪ ಸಜ್ಜನಶೆಟ್ಟಿ, ಪ್ರಭುಲಿಂಗ ಮೂಲಗೆ, ಬಸವಂತರಾಯ ಕೋಳಕೂರ, ಡಾ. ಅಶೋಕ ಜೀವಣಗಿ, ರೇವಣಸಿದ್ದಪ್ಪ ಜೀವಣಗಿ, ಜಗದೀಶ ಮರಪಳ್ಳಿ, ವೇದಿಕೆ ಮೇಲಿದ್ದರು.

ಪೊರೆ ಕಳಚುವ ಪರಿ ವಿಶೇಷ ಕವಿಗೋಷ್ಠಿಗೆ ಹಿರಿಯ ಲೇಖಕ ಡಾ. ಬಸವ ಪಾಟೀಲ ಜಾವಳಿ ಚಾಲನೆ ನೀಡಿದರು. ಪ್ರಾಧ್ಯಾಪಕ ಪ್ರೊ. ವೆಂಕಣ್ಣ ಡೊಣ್ಣೇಗೌಡರ್ ಅಧ್ಯಕ್ಷತೆ ವಹಿಸಿದ್ದರು. ರವಿಕುಮಾರ ಸರಸಂಬಿ, ಮಲ್ಲಿನಾಥ ಪಾಟೀಲ ಕಾಳಗಿ ವೇದಿಕೆ ಮೇಲಿದ್ದರು. ಕವಿಗಳಾದ ಡಾ. ರಾಜಶೇಖರ ಮಾಂಗ್, ಡಾ. ಕೆ.ಗಿರಿಮಲ್ಲ, ಎಂ.ಎನ್.ಸುಗಂಧಿ, ರೇಣುಕಾ ಹಿರೇಗೌಡರ್, ಶಕುಂತಲಾ ಪಾಟೀಲ, ಸುವರ್ಣಾ ಪೊದ್ದಾರ, ರವೀಂದ್ರ ಬಿ.ಕೆ., ಸುವರ್ಣಾ ಹೂಗಾರ ಸೇರಿ ಅನೇಕರು ವೈಚಾರಿಕತೆಯ ಚಿಂತನೆಗಳನ್ನು ತಮ್ಮ ಕಾವ್ಯದ ಮೂಲಕ ಹೊರ ಹಾಕಿದರು.

ವಿವಿಧ ಕ್ಷೇತ್ರದ ಸಾಧಕರಾದ ಸೂರ್ಯಕಾಂತ ಡುಮ್ಮಾ, ಶಾರದಾ ಬುಕ್ಕೇಗಾರ, ಡಾ. ಸುಜಾತಾ ಎಸ್ ಮಾಳಗಿ, ಸೋಮಣ್ಣಾ ಕೊಳ್ಹಾರ, ಸಂಗೀತಾ ಕಿಣಗಿ, ಬಸವರಾಜ ಕುಮ ಸಿ, ವಿಶ್ವನಾಥ ಮಂಗಲಗಿ, ಮಹಾದೇವಿ ಕೆಸರಟಗಿ, ಬಾಬುರಾವ ಜನಕಟ್ಟಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ವಚನಾಧಾರಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಬಸವಾದಿ ಶರಣರ ಆಶಯಕ್ಕೆ ತಕ್ಕಂತೆ ಸಮಾನ ದೃಷ್ಠಿಯಿಂದ ಕಾಣುವ ನಿಟ್ಟಿನಲ್ಲಿ ವಿಧವಾ ತಾಯಂದಿಯರಿಗೆ ಸೀರೆ, ಕುಪ್ಪಸಗಳನ್ನು ನೀಡಿ ಉಡಿ ತುಂಬುವ ಪಕ್ಕಾ ವೈಚಾರಿಕ ಸಂದೇಶ ನೀಡಿ, ಪ್ರೇಕ್ಷಕರ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here