ಕಲಬುರಗಿ: ಕೋಲಿ ಸಮಾಜದ ಹೆಸರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೋಸದಾಟ ಮುಂದುವರೆಸಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಶಿವಕುಮಾರ ಅಪ್ಪಾಜಿ ಕಿಡಿಕಾರಿದ್ದಾರೆ.
ಸೇಡಂ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪಿಸಲಾಗಿದ್ದು, ಪಕ್ಷಾತೀತವಾಗಿ ಅಂಬಿಗರ ಚೌಡಯ್ಯ ಚಾರಿಟೇಬಲ್ ಟ್ರಸ್ಟ್ ನಡಿ ಸ್ಘಾಪಿಸಲಾಗಿದೆ.
ಅದನ್ನೇ ಗಾಳವಾಗಿ ಬಳಸಲು ಬಿಜೆಪಿ ಮುಂದಾಗಿದ್ದು, ಕೋಲಿ ಸಮಾಜವನ್ನು ದಾರಿತಪ್ಪಿಸುವ ಕೆಲಸಕ್ಕೆ ಮುಂದಾಗಿದೆ. ಪಕ್ಷಾತೀತ ಎಂದಾಗ ಎಲ್ಲರೂ ಕೂಡಿಕೊಂಡು ಮೂರ್ತಿ ಸ್ಥಾಪನೆಗೆ ಕೈಜೋಡಿಸಿದ್ದಾರೆ. ಆದರೆ ಈಗ ಬಿಜೆಪಿಯ ಮುಖಂಡರು ಮೂರ್ತಿ ಹೆಸರಲ್ಲಿ ಕೋಲಿ ಸಮಾಜದ ಮತ ಕೇಳುವುದು, ಕೋಲಿಸಮಾಜ ಬಿಜೆಪಿಗೆ ಬೆಂಬಲಿಸಿದೆ ಎಂಬ ಹೇಳಿಕೆ ನೀಡುವುದು ಖಂಡನೀಯ ಹಾಗೆ ಮತ ಕೇಳಲಿಕ್ಕೆ ಮೂರ್ತಿ ಸ್ಥಾಪಿಸಿದ್ದಲ್ಲಿ ಬಿಜೆಪಿ ಹೆಸರಲ್ಲೇ ಕಾರ್ಯಕ್ರಮ ಮಾಡಬೇಕಿತ್ತು ಎಂದು ಗುಡುಗಿದ್ದಾರೆ.
ನಿರಂತರವಾಗಿ ಕೋಲಿ ಸಮಾಜವನ್ನು ತುಳಿಯುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಎಸ್ಟಿ ಹೆಸರಲ್ಲಿ ಮೋಸ ಮಾಡುತ್ತಾ ಬಂದಿದೆ. ಕೇವಲ ಚುನಾವಣೆ ಬಂದಾಗ ಮಾತ್ರ ಎಸ್ಟಿ ಮುಂಚೂಣಿಗೆ ಬರುತ್ತಿದೆ. ನಂತರ ಮೂಲೆಗುಂಪು ಮಾಡಲಾಗುತ್ತಿದೆ ಎಂದರು.
ಕೋಲಿ ಸಮಾಜವನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಿರಂತರ ದುರ್ಬಳಕೆ ಮಾಡಿಕೊಂಡು ಮೋಸ ಮಾಡುತ್ತಾ ಬಂದಿದೆ. ಎಸ್ಟಿ ಹೆಸರಲ್ಲಿ ಚುನಾವಣೆ ಬಂದಾಗ ನಾಟಕವಾಡುತ್ತಾ ಸಾಗಿದೆ. ಈ ರೀತಿಯ ಡೊಂಬರಾಟಕ್ಕೆ ಕೋಲಿ ಸಮಾಜದ ಬಂಧುಗಳು ಒಳಗಾಗಬಾರದು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ನುಡಿದಂತೆ ನಡೆಯುವ ಸಮರ್ಥ ಮತ್ತು ಭರವಸೆಯ ನಾಯಕರಾಗಿದ್ದಾರೆ. ಸೇಡಂಗೆ ಬಂದಾಗ ಈ ಬಾರಿ ಜೆಡಿಎಸ್ ಪಕ್ಷ ಆಡಳಿತಕ್ಕೆ ಬಂದಲ್ಲಿ ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸುವಂತಹ ಕೆಲಸ ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕೋಲಿ ಸಮಾಜ ಎಸ್.ಟಿಗೆ ಸೇರಿದ್ದಲ್ಲಿ ಸಮಾಜ ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೋಲಿ ಸಮಾಜ ಬಾಂಧವರು ವಿಚಾರವಂತರಾಗಿದ್ದು, ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಬೇಕು’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರಾದ ಸುನಿತಾ ತಳವಾರ, ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಚನ್ನಕ್ಕಿ ಇದ್ದರು.