ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲೆ ನಿರಂತರವಾದ ದಬ್ಬಾಳಿಕೆ ಮಾಡುತ್ತಿದ್ದಾನೆ: ಶ್ರೀ ಡಾ. ರೇವಣಸಿದ್ಧ ಶಿವಾಚಾರ್ಯರು

0
42

ಕಲಬುರಗಿ: ಮನುಷ್ಯ ಇಂದು ಆಧುನಿಕತೆ ಮತ್ತು ನಾಗರಿಕತೆ ಹೆಸರಿನಲ್ಲಿ ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲೆ ನಿರಂತರವಾದ ದಬ್ಬಾಳಿಕೆ ಮಾಡುತ್ತಿದ್ದು ಇದನ್ನು ನಿಲ್ಲಿಸದೇ ಹೋದರೆ ಭವಿಷ್ಯದಲ್ಲಿ ಬಹು ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಶ್ರೀನಿವಾಸ ಸರಡಗಿಯ ಶ್ರೀ ಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ ಪೂಜ್ಯರಾದ ಶ್ರೀ ಡಾ. ರೇವಣಸಿದ್ಧ ಶಿವಾಚಾರ್ಯರು ನುಡಿದರು.

ಕಲಬುರಗಿ ತಾಲೂಕಿನ ಉಪಳಾಂವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಏಳನೇಯ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳ ಮಹಾಪುರಾಣ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಭರತಖಂಡದ ಪ್ರಾಚೀನ ಋಷಿಮುನಿಗಳು, ಯತಿಗಳು, ನದಿ ಅರಣ್ಯಗಳಲ್ಲಿ ತಪಸ್ಸು ಮಾಡಿ ನೆಲ, ಜಲ, ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ. ಇಂದು ನಾವುಗಳು ಅಭಿವೃದ್ಧಿ ಹೆಸರಿನಲ್ಲಿ ನದಿಯ ಒಡಲು ಬರಿದು ಮಾಡಿ, ಕಾಡು ಕಡಿದು, ಗುಡ್ಡ ಬೆಟ್ಟಗಳನ್ನು ನುಂಗಿ ಪರಿಸರವನ್ನು ಹಾಳು ಮಾಡಿ ಬದುಕುತ್ತಿದ್ದೇವೆ. ಇದರ ಪರಿಣಾಮವಾಗಿ ಇಂದು ಭೀಕರವಾದ ಜಲಪ್ರಳಯ ಒಂದೆಡೆಯಾದರೆ ಮತ್ತೊಂದೆಡೆ ಅತಿಯಾದ ಬರಗಾಲ ಕಾಣುತ್ತಿದ್ದೇವೆ ಎಂದು ವಾಸ್ತವ ಪರಿಸ್ಥಿತಿಯನ್ನು ತಿಳಿ ಹೇಳಿದರು.

Contact Your\'s Advertisement; 9902492681

ಮಹಾನಗರಗಳಿಗೆ ಹೊಂದಿಕೊಂಡಿರುವ ಸುತ್ತಮುತ್ತಲಿನ ಹಳ್ಳಿಗಳ ಉತ್ತಮ ಫಸಲು ನೀಡುವ ಭೂಮಿಗಳಲ್ಲಿ ಬಡಾವಣೆಗಳನ್ನು ನಿರ್ಮಿಸುತ್ತಿರುವುದರಿಂದ ಆ ಗ್ರಾಮಗಳಲ್ಲಿ ಒಕ್ಕಲುತನ ಮಾಯವಾಗಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ಹೇಳಿದ ಶ್ರೀಗಳು ನಗರಗಳಿಗೆ ಆಹಾರ, ಹಾಲು, ತರಕಾರಿ ಪೂರೈಸುವ ಹಳ್ಳಿಗಳೇ ಇಂದು ನಗರಗಳಿಂದ ತರಕಾರಿ, ಹಾಲು ತಂದು ತಿನ್ನುವ ಪರಿಸ್ಥಿತಿ ಸೃಷ್ಟಿಯಾಗಿರುವುದು ಶೋಚನಿಯ ಎಂದು ನೊಂದು ನುಡಿದರು. ಧರ್ಮ ಪರಂಪರೆಯಲ್ಲಿ ಪ್ರಕೃತಿಗೆ ಮಹತ್ವದ ಸ್ಥಾನವಿದ್ದು ನಮ್ಮ ಪೂರ್ವಜರು ಸಹಜವಾಗಿ ಆರೋಗ್ಯಕರ ಜೀವನ ನಡೆಸಲು ಅವರ ಪ್ರಕೃತಿಯೊಂದಿಗೆ ಇದ್ದ ಅವಿನಾಭಾವ ಸಂಬಂಧವೇ ಕಾರಣವೆಂದರು. ಖಾಲಿ ಇರುವ ಸ್ಥಳಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಿಡ ಮರಗಳು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿ ಮುಂದುವರಿಯುವುದು ಇಂದಿನ ಅಗತ್ಯವಾಗಿದೆ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ನ್ಯಾಯವಾದಿಗಳಾದ ಹಣಮಂತರಾಯ ಎಸ್. ಅಟ್ಟೂರ  ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಪುರಾಣ ಪ್ರವಚನಗಳಿಂದ ಪರಸ್ಪರ ಅರ್ಥೈಸುವಿಕೆ ಸಹಬಾಳ್ವೆ, ಸಾಮರಸ್ಯ ಮೂಡಲಿದ್ದು ಇದರಿಂದ ಗ್ರಾಮ ವಿಕಾಸ ಸಾಧ್ಯವೆಂದು ನುಡಿದರು. ನಮ್ಮೆಲ್ಲರ ಬದುಕಿಗೆ ಮಹಾತ್ಮರ ನಡೆನುಡಿಗಳೆ ಆದರ್ಶಪ್ರಾಯವಾಗಿದ್ದು ಅವರ ನಿಸ್ವಾರ್ಥ ಜನಸೇವೆ, ಸಮಾಜಸೇವೆ, ಪರಹಿತ ಆಲೋಚನೆ ನಮಗೆ ದಾರಿದೀಪವೆಂದು ನುಡಿದ ಅವರು ಯುವಸಮೂಹಕ್ಕೆ ಮತ್ತು ಮುಂದಿನ ಪೀಳಿಗೆಗೆ ಮಹಾತ್ಮರ ಜೀವನ ಸಂದೇಶ ತಿಳಿಸುವ ಕೆಲಸವಾಗಬೇಕೆಂದರು. ಜನಪರ ಹೋರಾಟಗಾರ ನಾಗಲಿಂಗಯ್ಯ ಮಠಪತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಲಬುರಗಿ ತಾ.ಪಂ. ಮಾಜಿ ಅಧ್ಯಕ್ಷರಾದ ವಿಜಯಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

೧೧ದಿನಗಳ ಕಾಲ ಪ್ರತಿದಿನ ರಾತ್ರಿ ೮.೩೦ರಿಂದ ೧೦.೩೦ರವರೆಗೆ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಟೆಂಗಳಿಯವರ ಅಮೃತವಾಣಿಯಿಂದ ಪುರಾಣ ನಡೆಯುತ್ತಿದ್ದು ಸಂಗೀತ ಕಲಾವಿದರಾದ ಶಿವಶರಣಯ್ಯ ಸ್ವಾಮಿ ಬೀದಿಮನಿ, ತಬಲಾ ಸಾಥ ಮಹಾಂತೇಶ ಹರವಾಳ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಪೀಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾದ ಶ್ರೀನಿವಾಸ ಸರಡಗಿಯ ಶ್ರೀಗಳಿಗೆ ಸಮಸ್ತ ಉಪಳಾಂವ ಗ್ರಾಮಸ್ಥರ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here