ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ವಂತ ಆಸ್ತಿಯನ್ನಾಗಿಸಿಕೊಂಡಿದ್ದ ಕೆಲವರ ಕೈ ಯಿಂದ ಹೋಗಿ ಸಂಘಟನಾ ಚತುರ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮೇಲೆ ಪರಿಷತ್ತು ಜನಸಾಮಾನ್ಯರ ಸ್ವತ್ತಾಗಿಸುತ್ತಿದ್ದಾರೆ. ಒಂದೇ ತಿಂಗಳಲ್ಲೇ ಮಕ್ಕಳ ಸಾಹಿತ್ಯ ಸಮ್ಮೇಳನ, ಯುವ ಸಾಹಿತ್ಯ ಸಮ್ಮೇಳನ, ಸಂಸ್ಕøತಿ ವೈಭವ, ಸಾಹಿತ್ಯ ಉತ್ಸವ ಹೀಗೆ ಹತ್ತು ಹಲವು ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಪ್ರತಿನಿಧಿ ವಿನೋದ ಜೇನವೇರಿ ಸೇರಿದಂತೆ ಅನೇಕರು ತಿಳಿಸಿದ್ದಾರೆ.
ಪರಿಷತ್ತಿನ ಜಿಲ್ಲಾ ಘಟಕದ ನಿಕಟಪೂರ್ವ ಆದ್ಯಕ್ಷರ ಆರೋಪಕ್ಕೆ ಪ್ರತಿಯಾಗಿ ಹೇಳಿಕೆ ಕೊಟ್ಟಿರುವ ಅವರು, ಹೊಸ ಆಲೋಚನೆ, ವಿಭಿನ್ನ ಪ್ರಯೋಗದೊಂದಿಗೆ ಪರಿಷತ್ತಿನ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಾಹಿತಿಗಳು, ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಕಾರ್ಯ ಅನೇಕ ಜನಮುಖಿ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ. ಇದನ್ನು ಗಮನಿಸದೇ ರಾಜಕೀಯ ಪಕ್ಷದ ವಿಪಕ್ಷ ನಾಯಕನಂತೆ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುವುದು ಸಮಂಜಸವಲ್ಲ.
ನಿಕಟಪೂರ್ವ ಅಧ್ಯಕ್ಷರು ತಮ್ಮ ಮೂರು ಅವಧಿಯಲ್ಲಿ ಸಾಮಾನ್ಯ ಕನ್ನಡಾಭಿಮಾನಿಗೆ ಪರಿಷತ್ತಿನ ಸದಸ್ಯತ್ವ ನೋಂದಣಿ ಮಾಡಿಸುವ ಬದಲಾಗಿ ತಮಗೆ ಬೇಕಾದವರಿಗೆ ಮಾತ್ರ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದರು ಎಂದು ಅನೇಕ ಜನರು ಕನ್ನಡ ಭವನಕ್ಕೆ ಬಂದು ಹೇಳಿಕೊಂಡಿದ್ದಾರೆ.
ಆ ಕಾರಣಕ್ಕಾಗಿಯೇ ಪರಿಷತ್ತನ್ನು ಜನಸಾಮಾನ್ಯರ ಪರಿಷತನ್ನಾಗಿ ಮಾಡುವ ದೃಷ್ಟಿಯಿಂದ ಸದಸ್ಯತ್ವದ ನೋಂದಣಿಯನ್ನು ಬಹಿರಂಗವಾಗಿ ಅಭಿಯಾನದ ಮೂಲಕ ನಡೆಸುವ ಕಾರ್ಯ ಇದೇ ಮೊದಲ ಬಾರಿಗೆ ಎಂಬುದು ಯಾರು ಅಲ್ಲಗೆಳೆಯುವಂತಿಲ್ಲ.
ನಿಕಟಪೂರ್ವ ಅಧ್ಯಕ್ಷರು ಮೂರು ಅವಧಿಯಲ್ಲಿ ಮಾಡಿದ ಕಾರ್ಯಕ್ರಮಗಳು ಪ್ರಸ್ತುತ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಕೇವಲ ಒಂದೂವರೆ ವರ್ಷದಲ್ಲೇ ಮಾಡಿದ್ದಾರೆ.
ಕನ್ನಡ ಭವನದಲ್ಲಿ ನಿರಂತರ ವೈವಿಧ್ಯಮಯ ಕಾರ್ಯಕ್ರಮಗಳ ಅಯೋಜನೆ ಜೊತೆಗೆ ಪ್ರಾಂಗಣದಲ್ಲಿ ವರ್ಣರಂಜಿತ ಬಯಲು ರಂಗಮಂದಿರದ ಜೊತೆಗೆ ಕನ್ನಡ ಭವನದ ಅಂಗಳದಲ್ಲಿ ನಾಡಿನ ಕವಿಗಳ ಕವಿವಾಣಿಗಳ ನಾಮಫಲಕ, ಕನ್ನಡ ಭವನದ ಅಧ್ಯಕ್ಷರ ಕೋಣೆ.. ಹೀಗೆ ಅನೇಕ ರಚನಾತ್ಮಕ ಕಾರ್ಯಗಳನ್ನು ಮಾಡಿ ಎಲ್ಲಾ ವರ್ಗದ ಜನರಿಂದ ಸೈ ಎನಿಸಿಕೊಳ್ಳುತ್ತಿರುವುದು ಸಹಿಸಿಕೊಳ್ಳದೇ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.