ಕಲಬುರಗಿ; ಶನಿವಾರದಂದು ಆಳಂದ ತಾಲ್ಲೂಕಿನ ಗ್ರಾಮಯೊಂದರಲ್ಲಿ 11 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬಾವಿಯಲ್ಲಿ ಎಸೆದಿರುವ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಇಡೀ ಸಮಾಜವನ್ನೇ ಲಿಂಗಸಂವೇದನಾಶೀಲಗೊಳಿಸುವ ದಿಕ್ಕಿನಲ್ಲಿ ಜಿಲ್ಲಾ ಆಡಳಿತವು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿ ಮತ್ತು ಪೋಷಕರನ್ನೊಳಗೊಂಡು ಲಿಂಗಸಮಾನತೆಯ ವಿವೇಕದತ್ತ ಸಜ್ಜುಗೊಳಿಸಬೇಕು ಎಂದು ಆಗ್ರಹಿದರು.
ಜಿಲ್ಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆಗಳು ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿಯಾದ ಆಘಾತಕಾರಿಯಾದ ಸಂಗತಿಯಾಗಿದೆ. ಶನಿವಾರದಂದು ಆಳಂದ ತಾಲ್ಲೂಕಿನ ಗ್ರಾಮಯೊಂದರಲ್ಲಿ 11 ವರ್ಷದ ಬಾಲಕಿಯನ್ನು ತಚಿಕ್ಕಮ್ಮನ ಮನೆಗೆ ಹೋಗುವಾಗ ದುಷ್ಟ ಕಾಮುಕರು ಎಳೆದೊಯ್ದು ಅತ್ಯಾಚಾರಗೈದು ಬಾರ್ಬರಿಕವಾಗಿ ಕೊಲೆ ಮಾಡಿ ಬಾವಿಗೆ ಎಸೆದ ಘಟನೆಯು ನಡೆದಿದೆ.
ಇದು ಆಳಂದ ತಾಲ್ಲೂಕಿನಲ್ಲಿ ನಡೆದ ಮೂರನೆಯ ಘಟನೆಯಾಗಿದೆ. ಇದು ಹೆಣ್ಣು ಹೆತ್ತವರ ಎದೆಯಲ್ಲಿ ಜ್ವಾಲಾಗ್ನಿ ಮತ್ತು ತೀವ್ರ ಚಿಂತೆಯನ್ನು ಹುಟ್ಟು ಹಾಕಿದೆ. ಮಕ್ಕಳನ್ನು ಹೀಗೆ ನೋಡ ನೋಡುತ್ತಲೇ ಕಳೆದುಕೊಳ್ಳುವುದು ಅಂದರೆ ಏನರ್ಥ? ಈ ಬಾಲೆಯನ್ನು ಅತ್ಯಾಚಾರಗೈದು ಕೊಂದು ಹಾಕಿದ ಕ್ರೂರಿಗೆ ಉಗ್ರ ಶಿಕ್ಷೆ ಆಗಲೇಬೇಕು. ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ ಎಂದು ಕೆ ನೀಲಾ ತಿಳಿಸಿ ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳು ಏನು ಮಾಡುತ್ತಿವೆ? ಈ ರೀತಿಯ ಅತ್ಯಾಚಾರ ಕೊಲೆಗಳನ್ನು ತಡೆಗಟ್ಟುವ ದಿಕ್ಕಿನಲ್ಲಿ ಅವುಗಳ ಕಾರ್ಯಯೋಜನೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಮಠ ಡಾ.ಚಂಧ್ರಕಲಾ ಅವರು ಆಕ್ರೋಶ ವ್ಯಕ್ತಪಡಿಸಿದರು.
ಆತಂಕ ತಲ್ಲಣ ಭಯವನ್ನು ಹುಟ್ಟು ಹಾಕುತ್ತಿರುವ ಇಂತಹ ಕೃತ್ಯಗಳನ್ನು ತಡೆಯುವುದು ಯಾವುದೇ ನಾಗರೀಕ ಸಮಾಜದ ಮತ್ತು ಪ್ರಭುತ್ವದ ಜವಾಬ್ದಾರಿಯಾಗಿದೆ. ಆದ್ದರಿಂದ ನಾಡಿನ ಸಮಸ್ತ ಜನತೆಯು ಇಂತಹ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಬೇಕು. ಮತ್ತು ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕೈಗೊಳ್ಳಲು ಮುಂದಾಗಬೇಕು ಎಂದು ಡಾ. ಪ್ರಭು ಖಾನಾಪುರೆ ಆಗ್ರಹಿಸಿದರು.
ಪ್ರಭುತ್ವವು ಈ ಕುರಿತು ಕೂಡಲೇ ದುಷ್ಕರ್ಮಿಗಳನ್ನು ಸದೆ ಬಡೆಯಲು ಕಾರ್ಯತಂತ್ರ ರೂಪಿಸಬೇಕು. ಮತ್ತು ಯುದ್ಧೋಪಾದಿಯಲ್ಲಿ ಜಾರಿಗೊಳಿಸಲು ಜಿಲ್ಲಾಡಳಿತವು ಸಜ್ಜಾಗಬೇಕು. ಸಂಬಂಧಪಟ್ಟ ಇಲಾಖೆಗಳು ಈ ದಿಕ್ಕಿನಲ್ಲಿ ಕಾರ್ಯತತ್ಪರವಾಗಬೇಕು. ಜಿಲ್ಲೆಯಲ್ಲಿ ಲಿಂಗ ಭೇದ ನೀತಿಯು ಪ್ರಖರವಾಗಿದೆ. ಹೆಂಗೂಸು-ಹೆಣ್ಣುಮಕ್ಕಳ ಬಗ್ಗೆ ಸಮಾಜದಲ್ಲಿ ತಿರಸ್ಕಾರದ ಭಾವನೆಯೂ ಇದೆ ಎಂದು ಡಾ.ಶಾಂತಾ ಕಳವಳ ವ್ಯಕ್ತಪಡಿಸಿದರು.
ರವೀಂದ್ರ ಶಾಬಾದಿ, ಮಹಾಂತೇಶ ಕಲಬುರಗಿ, ಸುಧಾಮ ಧನ್ನಿ, ರೇಣುಕ, ಪದ್ಮಿನಿ ಕಿರಣಗಿ, ಚಂದಮ್ಮ ಗೋಳಾ, ರತ್ನ ಭೀಮಳ್ಳಿ, ಖಮರ್ ಉನ್ನಿಸಾ, ಕೋದಂಡರಾಮ, ಲವಿತ್ರ ನಿಕೋವ, ವಿರುಪಾಕ್ಷಪ್ಪ ತಡಕಲ್, ಶರಣಮ್ಮ ಕುಪ್ಪಿ, ನೀಲಾಂಬಿಕಾ ಸೇರಿದಂತೆ ಹಲವರು ಇದ್ದರು.