ಕಲಬುರಗಿ: ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಸುವ ಸಂಬಂಧ ನೀಡಿರುವ ಆದೇಶವನ್ನು ದಿಢೀರ್ ಹಿಂಪಡೆದಿದ್ದಕ್ಕೆ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ. 1ರಿಂದ 5ಲಕ್ಷ ರೂ.ವರೆಗಿನ ತುಂಡು ಗುತ್ತಿಗೆ ನೀಡುವುದು, ಪೂರ್ಣಗೊಂಡ ಎಲ್ಲ ಕಾಮಗಾರಿ ಬಿಲ್ಗಳನ್ನು ತಕ್ಷಣ ಪಾವತಿಸಬೇಕು, ವಿಭಾಗವಾರು ಬಜೆಟ್ ಒದಗಿಸಬೇಕು ಸೇರಿ 14 ಬೇಡಿಕೆ ಈಡೇರಿಕೆಗೆ ಇತ್ತೀಚೆಗೆ ಕಲಬುರಗಿಯಲ್ಲಿ ಬೃಹತ್ ಹೋರಾಟ ನಡೆಸಿ ಮನವಿ ಸಲ್ಲಿಸಲಾಗಿತ್ತು.
ಮನವಿ ಹಿನ್ನೆಲೆಯಲ್ಲಿ ಜೆಸ್ಕಾಂ ತಾಂತ್ರಿಕ ನಿರ್ದೇಶಕರು ಬೇಡಿಕೆ ಈಡೇರಿಕೆ ಸಂಬಂಧ ಆದೇಶ ಹೊರಡಿಸಿದ್ದರು. ಆದರೆ ವ್ಯವಸ್ಥಾಪಕ ನಿರ್ದೇಶಕರು ಈ ಆದೇಶಕ್ಕೆ ಬ್ರೇಕ್ ಹಾಕಿ ವಿದ್ಯುತ್ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರೆಂದು ಕಲಬುರಗಿ ತಾಲೂಕ ಅಧ್ಯಕ್ಷ ಶಿವಕುಮಾರ ಎಸ್.ಕಿಳ್ಳಿ, ದೂರಿದ್ದಾರೆ.
ತಕ್ಷಣ ಎಲ್ಲ ಬೇಡಿಕೆ ಈಡೇರಿಕೆಗಾಗಿ ಹೊರಡಿಸಿದ ಆದೇಶ ರದ್ದುಗೊಳಿಸಿದ್ದನ್ನು ವಾಪಸ್ ಪಡೆದು ನಮಗೆ ನ್ಯಾಯ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಕಲಬುರಗಿಯಲ್ಲಿ ಜೆಸ್ಕಾಂ ವ್ಯಾಪ್ತಿಯ ಎಲ್ಲ ಜಿಲ್ಲೆಗಳವರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.