ಮಾದನಹಿಪ್ಪರಗಿ: ಸ್ವಸಹಾಯ ಸಂಘಗಳ ಎಲ್ಲಾ ಸದಸ್ಯರು ಪರಿಸರ ಮತ್ತು ಸ್ವಚ್ಛತೆಗೆ ಆಧ್ಯತೆ ನೀಡಿ ಮನೆಯ ಯಜಮಾನರ ದುಶ್ಚಟಗಳಿಗೆ ದುರ್ಗಿಯಾಗಿ ಹೋರಾಡಿರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಕಲಬುರಗಿ ಜಿಲ್ಲಾ ನಿದೇರ್ಶಕ ಸತೀಶ ಸುವರ್ಣಾ ಹೇಳಿದರು.
ಗ್ರಾಮದಲ್ಲಿ ಇಂದು ಶರಣಶಿವಲಿಂಗೇಶ್ವರ ಸಭಾಗೃಹದಲ್ಲಿ ನಡೆದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ಮಾದನಹಿಪ್ಪರಗಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಧರ್ಮಸ್ಥಳ ಸಂಸ್ಥೆ ಸಾಲಕೊಡುವ ಸಂಸ್ಥೆ ಅಲ್ಲ. ಸ್ಥಳಿಯ ಬ್ಯಾಂಕಗಳಿಂದ ಸಂಘಗಳ ಸದಸ್ಯರುಗಳಿಗೆ ಸಾಲ ಕೊಡಲು ಶಿಪಾರಸ್ಸು ಮಾಡುತ್ತದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಬದುಕಿನ ಸ್ವಾವಲಂಭಿ ಜೀವನ ಸಾಗಿಸಲು ನೆರವಾಗಲಿದೆ.
ಪರಿಸರಕ್ಕಾಗಿ ಎಲ್ಲರು ಒಂದೊಂದು ಗಿಡ ನೆಡಿ. ಜಿಲ್ಲೆಯಲ್ಲಿ ಸಂಸ್ಥೆಯಿಂದ ಮೂರು ಲಕ್ಷ ಗಿಡಗಳನ್ನು ನೆಡಲಾಗಿದೆ. ಮತ್ತು 30 ಕೆರೆಗಳನ್ನು ನಿರ್ಮಿಸಲಾಗಿದೆ. ಸಂಸ್ಥೆ ಶಾಲಾಭೀವೃದ್ಧಿಗಾಗಿ ನಿರ್ಗತಿಕರಿಗೆ ಮಾಸಾಶನ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ, ಮಹಿಳಾ ಸದಸ್ಯರುಗಳಿಗೆ ಗುಡಿ ಕೈಗಾರಿಗೆ ನಡೆಸಲು 3 ಲಕ್ಷ ರೂ.ಗಳವರೆಗೆ ಸಾಲಸೌಲಭ್ಯ, ಪೂಜ್ಯ ವಿರೇಂಧ್ರ ಹೆಗಡೆಯವರು ಸಂಸದರಾದ ಮೇಲೆ ಕೇಂದ್ರ ಸರಕಾರದಿಂದ 10 ಕೋಟಿ ರೂ.ಗಳ ಅನುದಾನದ ಜೊತೆಗೆ ಸಂಸ್ಥೆಯಿಂದ 11 ಕೋಟಿ ರೂ.ಗಳ ಧನಸಹಾಯದೊಂದಿಗೆ ಈ ಭಾಗದಲ್ಲಿ ಹೈನುಗಾರಿಕೆಗಾಗಿ ಹಣ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದಾರಕ್ಕಾಗಿ ಧನಸಹಾಯ ಕೂಡಾ ಮಾಡಲಾಗಿದೆ ಎಂದರು.
ತಾಲೂಕಾ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಇತಿಹಾಸ ಮತ್ತು ನಡೆದು ಬಂದ ದಾರಿ, ಮತ್ತು ಧ್ಯೇಯಗಳ ಬಗ್ಗೆ ಮಾತನಾಡಿದರು. ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ದಿನೇಶ, ಮುಖಂಡ ಮಲ್ಲಿನಾಥ ಮೈಂದರಗಿ, ಮಾತನಾಡಿದರು.
ಮಲ್ಲಯ್ಯ ಸ್ವಾಮಿ ಮದಗುಣಕಿ, ಸಿದ್ದು ತೋಳನೂರ, ಸಿದ್ದಾರೂಡ ಜಳಕೋಟಿ, ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಮೈಂದರಗಿ ಕಾರ್ಯಕ್ರಮದ ಅಧ್ಯಕ್ಷೆತೆವಹಿಸಿದ್ದರು. ವಲಯ ಮೇಲ್ವಿಚಾರಕ ಪ್ರಮೋದ ಹೂಗಾರ ನೀರೂಪಿಸಿದರು. ತಾಲೂಕಾ ಮಹಿಳಾ ಜ್ಞಾನವಿಕಾಸ ಕೇಂದ್ರದ ಅಧಿಕಾರಿ ಚೆನ್ನಮ್ಮ ಹೊಸಮನಿ ವಂದಿಸಿದರು.