ಸುರಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ತಾಲೂಕು ಆಡಳಿತ,ತಾಲೂಕು ಪಂಚಾಯತ,ತಾಲೂಕು ಕಾರ್ಮಿಕ ಇಲಾಖೆ,ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನ ಯೋಜನಾ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ತಹಸೀಲ್ದಾರ್ ಕಚೇರಿ ಬಳಿಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂನೆಗಾಗಿ ಎಸ್.ಸಿ.ಎಸ್.ಪಿ,ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಎಸ್.ಸಿ,ಎಸ್.ಟಿ ಕಾಲೋನಿಗಳಲ್ಲಿ ಜಾಗೃತಿ ಮೂಡಿಸಲು ಆಟೋ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಜೊತೆಗೆ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದ ತಹಸೀಲ್ದಾರ್ ವಿಜಯಕುಮಾರ ಕೆ ಮಾತನಾಡಿ, ಬಾಲಕಾರ್ಮಿಕ ಪದ್ದತಿ ಅಳಿಸಿ, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಬೇಕು , 14 ವರ್ಷದೊಳಗಿನ ಬಾಲಕಾರ್ಮಿಕ ಮತ್ತು 18 ವರ್ಷದೊಳಗಿನ ಕಿಶೋರ ಕಾರ್ಮಿಕ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನಿನ ಶಿಕ್ಷಾರ್ಹ ಅಪರಾಧವಾಗಿದೆ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ದುಡಿಸಿಕೊಂಡಲ್ಲಿ ಮಾಲೀಕರುಗಳ ಮೇಲೆ ರೂ. 20,000 ರಿಂದ 50,000 ರೂ. ವರೆಗೂ ದಂಡ ಮತ್ತು 6 ತಿಂಗಳಿಂದ 2 ವರ್ಷಗಳ ವರೆಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಮಿಕನಿರೀಕ್ಷಕರಾದ ವಿಜೇಂದ್ರ ಅವರು ಮಾತನಾಡಿ, ಮಕ್ಕಳನ್ನು ಯಾವುದೇ ಅಂಗಡಿ ಮತ್ತು ಅಪಾಯಕಾರಿ ಸಂಸ್ಥೆಗಳಲ್ಲಿ, ವಾಣಿಜ್ಯ ಸಂಸ್ಥೆ, ಗ್ಯಾರೇಜ್, ಕಾರ್ಖಾನೆ, ಹೋಟೆಲ್, ರೆಸ್ಟೋರೆಂಟ್, ಡಾಭಾ, ಮನೆಗೆಲಸ ಇತರೆ ಯಾವುದೇ ಉದ್ಯೋಗದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಅಷ್ಟಾಗಿಯೂ ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅವರ ವಿರುದ್ದ ಕಠೀಣ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಂತರ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ರವರು ಮಾತನಾಡಿ, ಈ ಭಾಗದಲ್ಲಿ ಕೃಷಿ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವು ಕಂಡುಬರುತ್ತಿದೆ. ಆದ್ದರಿಂದ ಪಾಲಕರು, ಪೋಷಕರು ಹಾಗೂ ಹೊಲದ ಮಾಲೀಕರು ಮಕ್ಕಳನ್ನು ದುಡಿಸಿಕೊಳ್ಳದೆ ಶಾಲೆಗೆ ಕಳುಹಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಬಾಲು ಕುಪಗಲ್, ರಾಜು ಕಲಾಲ್ ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಮುಬೀನ್ ದಖನಿ,ತಿಮ್ಮಯ್ಯ ತಳವಾರ, ರಾಘವೇಂದ್ರ ಭಕ್ರಿ ಇದ್ದರು.