ಜನತಾ ದರ್ಶನದಲ್ಲಿ ಯಾವುದೇ ಲೋಪವಾಗದಂತೆ ತಯಾರಿ ಮಾಡಿಕೊಳ್ಳಿ; ಡಿ.ಸಿ ಡಾ:ಸುಶೀಲಾ ಬಿ
ಸುರಪುರ: ಇದೇ 30 ರಂದು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು ಯಾವುದೇ ಲೋಪವಾಗದಂತೆ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ:ಸುಶೀಲಾ ಬಿ ತಿಳಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಎಲ್ಲಾ ಇಲಾಖೆಯ ಅಧಿಕಾರಿಗಳು 30 ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರಬೇಕು ಮತ್ತು ಪ್ರತಿಯೊಂದು ಇಲಾಖೆಯಿಂದ ಪ್ರತ್ಯೇಕ ಕೌಂಟರ್ ಮಾಡಿಕೊಂಡು,9 ಗಂಟೆಯಿಂದಲೇ ಅರ್ಜಿಗಳನ್ನು ಪಡೆದು ದಾಖಲೆ ಮಾಡಿಕೊಳ್ಳಿ,ನಂತರ 11 ಗಂಟೆಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಸ್ಥಳಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಭಾಗವಹಿಸಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ,ಪ್ರತಿ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಯಾವ ಇಲಾಖೆಯ ಅರ್ಜಿ ಬಂದಿರುತ್ತದೆಯೋ ಅವರಿಗೆ ಸ್ವೀಕೃತಿ ನೀಡುವುದು ಕಡ್ಡಾಯ ಮತ್ತು ತತ್ಕ್ಷಣದಲ್ಲಿ ಅರ್ಜಿಗೆ ಪರಿಹಾರ ಸಾಧ್ಯವಿಲ್ಲದಿದ್ದಲ್ಲಿ ಅರ್ಜಿಗೆ ಕೈಗೊಂಡ ಕ್ರಮ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿಸಲು ಪ್ರತಿ ಅರ್ಜಿಯನ್ನು ದಾಖಲಿಸುವುದು ತುಂಬಾ ಅವಶ್ಯವಾಗಿದೆ,ಇದಕ್ಕಾಗಿ ಹೆಚ್ಚು ಡಾಟಾ ಎಂಟ್ರಿ ಆಪರೇಟರ್ಗಳನ್ನು ನಿಯೋಜಿಸಿಕೊಳ್ಳುಂತೆ ಸೂಚಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆರೋಗ್ಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕೃಷಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳ ಮಳಿಗೆಗಳನ್ನು ತೆರೆಯುವುದು,ಕುಡಿಯುವ ನೀರು,ಉಪಹಾರದ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶರಣಬಸವರಾಜ,ತಹಸೀಲ್ದಾರ್ ಕೆ.ವಿಜಯಕುಮಾರ,ತಾ.ಪಂ ಇಓ ಬಸವರಾಜ ಸಜ್ಜನ್,ಪಿಐ ಆನಂದ ವಾಘಮೊಡೆ,ಲೋಕೊಪಯೋಗಿ ಇಲಾಖೆ ಜಿಲ್ಲಾ ಡಬ್ಲ್ಯೂ.ಇ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.