ಶಹಾಬಾದ:ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ(150) ಹೊಂದಿಕೊಂಡಿರುವ ವಾಡಿ-ಚಿತ್ತಾಪೂರ ವೃತ್ತದಲ್ಲಿ ಚಿತ್ತಾಪೂರ, ಕಲಬುರಗಿ, ಯಾದಗಿರಿ ಡಿಪೋದ ಎಲ್ಲಾ ಬಸ್ಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ ಆಗ್ರಹಿಸಿದ್ದಾರೆ.
ನೂರಾರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸರಕಾರಿ ನೌಕರರು, ಕೂಲಿ ಕಾರ್ಮಿಕರು,ಪ್ರಯಾಣಿಕರು ಸೇರಿದಂತೆ ಇತರ ಜನರು ದಿನನಿತ್ಯ ವಾಡಿ-ಚಿತ್ತಾಪೂರ ವೃತ್ತದಲ್ಲಿ ಬಸ್ಗಾಗಿ ಕಾಯುತ್ತಾರೆ.ಆದರೆ ಬಸ್ ಚಾಲಕರು ವಿದ್ಯಾರ್ಥಿ ಹಾಗೂ ಮಹಿಳೆಯರನ್ನು ಕಂಡರೆ ನಿಲ್ಲಿಸುತ್ತಿಲ್ಲ.ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಂದು ಬಸ್ಗಳು ಮಾತ್ರ ನಿಲ್ಲುತ್ತಿವೆ.ಆದರೆ ಬಹುತೇಖ ಬಸ್ಗಳು ನಿಲ್ಲಿಸದೇ ಇರುವುದರಿಂದ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ಶಹಾಬಾದ ಪಟ್ಟಣ ಉದ್ದಿಮೆ ನಗರಿ ಹಾಗೂ ತಾಲೂಕಾ ಪ್ರದೇಶ ಹೊಂದಿದೆ.ಅಲ್ಲದೇ ಒಂದು ಲಕ್ಷ ಜನಸಂಖ್ಯೆ ಹೊಂದಿದ್ದು, ಜಿಲ್ಲಿಯಲ್ಲಿಯೇ ನಗರಸಭೆಯನ್ನು ಹೊಂದಿರುವ ಏಕೈಕ ನಗರವಾಗಿದೆ. ತಾಲೂಕಾ ಪ್ರದೇಶದಲ್ಲಿ ನಿಲ್ಲಿಸದ ಬಸ್ಗಳು ರಾವೂ ಗ್ರಾಮದ ವೃತ್ತದಲ್ಲಿ ನಿಲ್ಲುತ್ತಿವೆ ಎಂದರೆ ಇದಕ್ಕಿಂತ ದುರ್ದೈವ ಮತ್ತೊಂದಿಲ್ಲ.
ಅಧಿಕಾರಿಗಳಿಗೆ ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಕೂಡಲೇ ವಾಡಿ-ಚಿತ್ತಾಪೂರ ವೃತ್ತದಲ್ಲಿ ಅಧಿಕಾರಿ ವರ್ಗದವರು ಎಲ್ಲಾ ಬಸ್ಗಳ ನಿಲುಗಡೆಗೆ ಕ್ರಮ ವಹಿಸಬೇಕು.ಕಲಬುರಗಿಯಿಂದ ಯಾದಗಿರಿಗೆ ಹೊರಡುವ ಮೂರು-ನಾಲ್ಕು ಬಸ್ಗಳನ್ನು ನಗರದ ಬಸ್ ನಿಲ್ದಾಣಕ್ಕೆ ಬಂದು ಯಾದಗಿರಿಗೆ ಹೋಗುವ ವ್ಯಸ್ಥೆ ಕಲ್ಪಿಸಬೇಕು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಗಮನಹರಿಸಿ ಎಲ್ಲಾ ಬಸ್ಗಳನ್ನು ಕಡ್ಡಾಯವಾಗಿ ನಿಲ್ಲಿಸಲು ಆದೇಶಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಡಾ.ರಶೀದ ಮನವಿ ಮಾಡಿದ್ದಾರೆ.