ಶಹಾಬಾದ: ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಆರೋಗ್ಯವೊಂದಿದ್ದರೆ ಆಗ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಆರ್ಬಿಎಸ್ಕೆ ವೈದ್ಯ ಡಾ. ಮಹ್ಮದ್ ಮತೀನ್ ಅಲಿ ಹೇಳಿದರು.
ಅವರು ನಗರದ ಎಸ್.ಜಿ.ವರ್ಮಾ ಹಿಂದಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.
ಅನಾರೋಗ್ಯ ದೇಹವನ್ನು ಕಾಡುತ್ತಲಿದ್ದರೆ, ಆಗ ಯಾವ ಕೆಲಸಕ್ಕೂ ಮನಸ್ಸು ಕೂಡ ಬರದು. ಹೀಗಾಗಿ ಆರೋಗ್ಯಕ್ಕೆ ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕಾಗಿದೆ. ಆರೋಗ್ಯ ಮತ್ತು ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ.ಮಕ್ಕಳು ಆರೋಗ್ಯವನ್ನು ಪ್ರೀತಿಸಬೇಕು. ಪರಿಸರ ಸ್ವಚ್ಛವಾಗಿಡಬೇಕು ಹಾಗೂ ಶುದ್ಧವಾದ ನೀರು, ಆಹಾರ, ಗಾಳಿಯನ್ನು ಸೇವಿಸುತ್ತಾ ಬಂದರೆ ಸಧೃಡ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.
ಡಾ.ಶ್ವೇತಾ ನಿಂಬಾಲಕರ್ ಮಾತನಾಡಿ, ಆರೋಗ್ಯಕಾರಿ ಜಿವನಶೈಲಿ ಮತ್ತು ಆಹಾರವು ಹಲವಾರು ಕಾಯಿಲೆಗಳನ್ನು ತಡೆಯಲು ತುಂಬಾ ಸರಳ ವಿಧಾನವಾಗಿದೆ. ಕೆಲವು ಸಣ್ಣ ಬದಲಾವಣೆಗಳು ಅದ್ಭುತವನ್ನು ಉಂಟು ಮಾಡಬಹುದು. ಮಕ್ಕಳು ಯೋಗ, ಧ್ಯಾನ, ಪೌಸ್ಟಿಕ ಆಹಾರ, ಸ್ವಚ್ಛತೆ ಬಗ್ಗೆ ಗಮನ ಹರಿಸಿದರೆ ಯಾವುದೆ ರೋಗಗಳಿಗೆ ತುತ್ತಾಗದೆ ಆರೋಗ್ಯದಿಂದ ಇರಬಹುದು.ಉತ್ತಮ ಆರೋಗ್ಯವು ಎಲ್ಲಾ ತೊಂದರೆಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೊಂದಿದೆ. ಮನುಷ್ಯ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅವರು ಬೆಳಿಗ್ಗೆ ವ್ಯಾಯಾಮ ಮಾಡಬೇಕು ಮತ್ತು ದೇಹಕ್ಕೆ ಶುದ್ಧ ಗಾಳಿಯನ್ನು ನೀಡಬೇಕು. ನಾವು ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಹೊರಗಿನ ಜಂಕ್ ಫುಡ್ ಅನ್ನು ತಪ್ಪಿಸಬೇಕು ಮತ್ತು ದೇಹವು ವಿಶ್ರಾಂತಿ ಪಡೆಯುವಂತೆ ಸಂಪೂರ್ಣ ನಿದ್ರೆಯನ್ನು ತೆಗೆದುಕೊಳ್ಳಬೇಕು. ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಾವು ಮಾನಸಿಕವಾಗಿಯೂ ಆರೋಗ್ಯವಂತರಾಗಿ ಸಂತೋಷವಾಗಿರುತ್ತೇವೆ ಎಂದು ಹೇಳಿದರು.
ಮುಖ್ಯಗುರುಗಳಾದ ಮಲ್ಲಿನಾಥ ಪಾಟೀಲ, ದೈಹಿಕ ಶಿಕ್ಷಕ ಚನ್ನಬಸಪ್ಪ ಕೊಲ್ಲೂರ್, ಆರ್ಬಿಎಸ್ಕೆ ತಂಡದ ಶಿವಲೀಲಾ,ಶಿವರಾಜ ಇತರರು ಇದ್ದರು.