ಶಹಾಬಾದ: ಪ್ರಜಾಪ್ರಭುತ್ವದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಲು ಅರ್ಹರು ಎಂದು ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.
ಅವರು ಸೋಮವಾರ ನಗರಸಭೆಯಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ಕಲಬುರಗಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮಹಿಳಾ ಮತದಾರರ ವಿಶೇಷ ನೊಂದಣಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಬೇಕು. 18 ವರ್ಷ ತುಂಬಿದ ಮಹಿಳೆಯರು ಅಗತ್ಯ ದಾಖಲೆ ನೀಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಮರಣ ಹೊಂದಿರುವವರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಕ್ರಮ ವಹಿಸಲಾಗುವುದು ಎಂದರು.ಅಲ್ಲದೇ ಮತದಾರ ಪಟ್ಟಿಯಿಂದ ಹೆಸರು ಕೈಬಿಟ್ಟದಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದ ಹಕ್ಕು ಮತದಾನ. ಅದಕ್ಕಾಗಿ 18 ವರ್ಷ ತುಂಬಿಕ ಯುವಕ/ಯುವತಿಯರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಬೇಕು. ಮತದಾನ ಹಕ್ಕನ್ನು ಪಡೆದ ಪ್ರತಿಯೊಬ್ಬರು ವಿವೇಚನಾಶೀಲರಾಗಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಚಲಾಯಿಸಬೇಕು. ಅμÉ್ಟೀ ಅಲ್ಲದೆ, ದೇಶದ ಮುಂದಿನ ಉತ್ತಮ ಭವಿಷ್ಯಕ್ಕಾಗಿ ತಪ್ಪದೆ ಮತದಾನ ಮಾಡಬೇಕು ಎಂದರು.
ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಹಾಗೂ ಸಿಡಿಪಿಓ ಡಾ.ವಿಜಯಲಕ್ಷ್ಮಿ ಹೇರೂರ ಮಾತನಾಡಿ,ಕಡ್ಡಾಯ ಮತದಾನ ನಮ್ಮೆಲ್ಲರ ಜವಾಬ್ದಾರಿ ಮತ್ತು ಹಕ್ಕಾಗಿದೆ. ಜಾಗೃತ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವಾಗಬೇಕಿದೆ. ಚುನಾವಣೆಯಲ್ಲಿ ಒಂದೊಂದು ಮತವು ನಿರ್ಣಾಯಕವಾಗಲಿದೆ. ತಾವು ಮತ ಚಲಾಯಿಸುವ ಜೊತೆಗೆ ಇತರರೂ ಮತದಾನವನ್ನು ಮಾಡುವಂತೆ ಜನತೆಯನ್ನು ಪ್ರೇರೆಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಬಿಎಲ್ಓ ಹಾಗೂ ಸ್ವಸಹಾಯ ಗುಂಪಿನ ಮಹಿಳೆಯರು ಇದ್ದರು.