ಆಳಂದ; ಅನೀಮಿಯಾ ಒಂದು ಕೊರತೆಯಾಗಿದ್ದು, ಇದನ್ನು ನಿರ್ಲಕ್ಷಿಸಿದ್ದಲ್ಲಿ ಇದು ಇನ್ನುಳಿದ ರೋಗಗಳಿಗೆ ದಾರಿ ಮಾಡಿಕೊಡುವುದು ಆದ್ದರಿಂದ ಜನರಿಗೆ ಮೊದಲ ಹಂತದಲ್ಲಿಯೆ ಅನೀಮಿಯಾ ಕುರಿತು ಅರಿವು ನೀಡಿ ಪರೀಕ್ಷೆ ಮಾಡಿಸಿ ನಂತರ ಚಿಕಿತ್ಸೆ ನೀಡುವುದರಿಂದ ಅದರಿಂದಾಗುವ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು ಎಂದು ಆಳಂದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಸಂಘರ್ಷ ವಾಲಿ ಹೇಳಿದರು.
ಗುರುವಾರ ಆಳಂದ ಪಟ್ಟಣದ ಎಂಎಆರ್ಜಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಸಿಎಚ್ ಕಲಬುರಗಿ ವಿಭಾಗ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಅನೀಮಿಯಾ ಕುರಿತ ಅರಿವು, ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅನೀಮಿಯಾ ಇದು ರಕ್ತದಲ್ಲಿ ಕೆಂಪು ರಕ್ತಕಣಗಳು ಹಾಗೂ ಹಿಮೊಗ್ಲೋಬಿನ್ ಕಡಿಮೆಯಾಗುವುದರಿಂದ ಬರುತ್ತದೆ. ಇದರಿಂದ ಸುಸ್ತು, ನಿಶಕ್ತಿ, ಉಸಿರಾಟದ ತೊಂದರೆ ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಕಂಡುಬರುತ್ತದೆ. ಆದ್ದರಿಂದ ನವೆಂಬರ್ 22 ದಿಂದ ಎಲ್ಲಾ ಕಾಲೇಜುಗಳಲ್ಲಿ ಹಿಮೋಗ್ಲೋಬಿನ್ ವಿದ್ಯಾರ್ಥಿಗಳಿಗೆ ಉಚಿತವಾಗಿ ತಪಾಸಣೆ ಮಾಡಿ ಕಡಿಮೆ, ವಿಪರೀತ ಕಡಿಮೆ ಹಿಮೋಗ್ಲೋಬಿನ್ ಇರುವ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಕ್ಕಾಗಿ ಈ ಕಾರ್ಯಕ್ರಮ ರಾಜ್ಯದಾದ್ಯಂತ 25 ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತಿದೆ. ಇದನ್ನು ಆರು ಹಂತದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಗೊಳಲು ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಯಲ್ಲಿ ಶಿಕ್ಷಣಾ ಇಲಾಖೆ ಹಾಗೂ ಪೋಷಕರ ಪಾತ್ರವು ಬಹು ಮುಖವಾಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ಇಂದಿನ ಜನರಲ್ಲಿ ಅನೀಮಿಯಾ ಹೆಚ್ಚಿಗೆ ಕಂಡುಬರುವುದಕ್ಕೆ ಜನರ ಜೀವನ ಶೈಲಿಯು ಪ್ರಮುಖ ಪಾತ್ರವಹಿಸುತ್ತಿದೆ. ಆದ್ದರಿಂದ ಪಾಕೀಟ್ನಲ್ಲಿರುವಂತಹ, ಫಾಸ್ಟ್ ಫುಡ್ನಂತಹ ಆಹಾರ ಪದಾರ್ಥಗಳನ್ನು ಸೇವಿಸುವದನ್ನು ಬಿಟ್ಟು ಮೊಳಕೆ ಕಾಳುಗಳನ್ನು, ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕೆಂದರು.
ಈ ಸಂದರ್ಭದಲ್ಲಿ ಡಾ. ಅಶ್ವಿನಿ, ಶುಶ್ರೂಷಕಿ ಗುರುದೇವಿ, ಅಪ್ಪಾರಾವ ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿ, ಸಿಬ್ಬಂದಿಗಳು ಹಾಗೂ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.