ಸುರಪುರ: ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿ,ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಮಹಾತ್ಮಾ ಗಾಂಧೀಜಿ ಅವರ ಶತ ವರ್ಷ 1969ರಲ್ಲಿ ಈ ಯೋಜನೆ ಜಾರಿಗೆ ಬಂದಿತು, ಯೋಜನೆಯನ್ನು ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಚಾಲನೆ ನೀಡಿತು. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಸವರಾಜ ಇನಾಮದಾರ ಮಾತನಾಡಿ, ನಿಸ್ವಾರ್ಥ ಸೇವೆಯಲ್ಲಿ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಮೆಚ್ಚಿಕೆಯಾಗಿ ಗುರುತಿಸಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಯೋಜನೆಯ ಧ್ಯೇಯ ವಾಕ್ಯ ಪ್ರತಿಬಿಂಬಿಸುತ್ತದೆ ಎಂದರು.
ಯೋಜನಾಧಿಕಾರಿ ಸೈದಾಬಿ ಜಮಾದಾರ ಮಾತನಾಡಿ, ‘ಕವಡಿಮಟ್ಟಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಡಿ. 9 ರಿಂದ 15ರ ವರೆಗೆ ಶಿಬಿರ ಏರ್ಪಡಿಸಲಾಗಿದೆ. ಪ್ರತಿ ದಿನ ಶ್ರಮದಾನ, ಯೋಗ, ಪರಿಣಿತರಿಂದ ವಿವಿಧ ವಿಷಯಗಳ ಬಗ್ಗೆ ಭಾಷಣ ಏರ್ಪಡಿಸಲಾಗಿದೆ’ ಎಂದರು.
ಮುಖಂಡ ಪ್ರಕಾಶ ಗುತ್ತೇದಾರ, ಉಪ ಪ್ರಾಚಾರ್ಯ ಯಲ್ಲಪ್ಪ ಬೊಮ್ಮನಳ್ಳಿ, ಶಿಕ್ಷಕರಾದ ವಿಶ್ವರಾಜ ಪುರಾಣಿಕಮಠ, ಮರೆಪ್ಪ ಹೊಸ್ಮನಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ ಚಿದಳ್ಳಿ, ಉತ್ತಪ್ಪ ಪುಜಾರಿ ಇದ್ದರು. ಕುಮಾರಗೌಡ ನಿರೂಪಿಸಿದರು. ಓ.ಎಚ್. ಪಾಟೀಲ ವಂದಿಸಿದರು.