ವಾಡಿ: ಸಮೀಪದ ಹಳಕರ್ಟಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಕ್ಕಳಿಗೆ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಯಿತು. ಶುಕ್ರವಾರ ವಾಚನಾಲಯದಲ್ಲಿ ವಿಶ್ವ ಮಕ್ಕಳ ಹಕ್ಕು ದಿನ ಆಚರಿಸುವ ಮೂಲಕ ಸಂವಿಧಾನ ನೀಡಿದ ಮಕ್ಕಳ ಹಕ್ಕುಗಳನ್ನು ಓದಿ ವಿವರಿಸಲಾಯಿತು.
ಮಕ್ಕಳಿಗಾಗಿ ಇರುವ ವಿಶೇಷ ಕಾನೂನುಗಳನ್ನು ಗಣಕಯಂತ್ರ ಪ್ರದರ್ಶಿಸಿ ಪರಿಚಯ ಮಾಡಿಕೊಡುವ ಮೂಲಕ ಮಾತನಾಡಿದ ಗ್ರಂಥಪಾಲಕ ಪ್ರಕಾಶ ಚಂದನಕೇರಿ, ಜನಿಸಿದ ಪ್ರತಿಯೊಬ್ಬ ಮಗು ಕಡ್ಡಾಯವಾಗಿ ಶಾಲೆಗೆ ದಾಖಲಾಗಬೇಕು. ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದರೆ ಬಾಲಕಾರ್ಮಿಕರಾಗುವ ಅಪಾಯವಿರುತ್ತದೆ. ಬಾಲಕಾರ್ಮಿಕ ಪದ್ದತಿ ಕಾನೂನು ಬಾಹಿರವಾಗಿದೆ. ಪೋಷಕರು ಮಕ್ಕಳನ್ನು ದುಡಿಮೆಗೆ ಹಚ್ಚುವಂತಿಲ್ಲ.
ಅಕ್ಷರ ಜ್ಞಾನ ಪಡೆದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗಲು ಸಾಧ್ಯ. ಪೌಷ್ಠಿಕ ಆಹಾರ ಮತ್ತು ಆರೋಗ್ಯಯುತ ಜೀವನ ನಡೆಸುವುದು ಮಕ್ಕಳ ಹಕ್ಕಾಗಿದೆ. ಸಾಮಾಜಿಕ ಶೋಷಣೆ, ದೌರ್ಜನ್ಯ, ಬಲತ್ಕಾರ ಹಾಗೂ ಹಿಂಸಾತ್ಮಕ ಕೃತ್ಯಗಳಿಂದ ರಕ್ಷಣೆ ಪಡೆಯಲು ಸಂವಿಧಾನದಲ್ಲಿ ಅಗತ್ಯ ಕಾನೂನುಗಳನ್ನು ಒದಗಿಸಲಾಗಿದೆ. ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.
ಗ್ರಾಮದ ಯುವ ಮುಖಂಡ ಸಿದ್ದು ಮುಗುಟಿ ಮಾತನಾಡಿ. ನಮ್ಮೂರಿನ ಗ್ರಂಥಾಲಯ ಸಾಹಿತ್ಯ ಕೃತಿಗಳ ಕಣಜವಾಗಿ ಗಮನ ಸೆಳೆಯುತ್ತಿದೆ. ಸಾವಿರಾರು ಪುಸ್ತಕಗಳು ಗ್ರಾಮದ ಓದುಗರ ಜ್ಞಾನ ಹೆಚ್ಚಿಸುತ್ತಿವೆ. ಗ್ರಂಥಾಲಯದಲ್ಲಿ ಶಾಲಾ ಮಕ್ಕಳಿಗಾಗಿ ನಿರಂತರವಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆ ಮೂಲಕ ಮಕ್ಕಳಿಗೆ ಗ್ರಂಥಾಲಯ ಸದ್ಬಳಕೆಯಾಗುತ್ತಿದೆ.
ಗ್ರಾಮದ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಗಂಟೆಗಟ್ಟಲೆ ಹರಟೆ ಹೊಡೆಯುವ ಬದಲು ಗ್ರಂಥಾಲಯಕ್ಕೆ ಬಂದು ಸಮಯ ಕಳೆದರೆ ಮನಸ್ಸಿಗೆ ನೆಮ್ಮದಿ ಜತೆಗೆ ಹಲವು ವಿಚಾರಗಳ ಪರಿಚಯವಾಗುತ್ತದೆ ಎಂದರು. ಇದೇ ವೇಳೆ ಗ್ರಾಮದ ವಿವಿಧ ಶಾಲೆಗಳ ಮಕ್ಕಳು ಕಂಪ್ಯೂಟರ್ ಮೂಲಕ ಗ್ರಂಥಾಲಯದಲ್ಲಿ ಮಕ್ಕಳ ಹಕ್ಕುಗಳ ಉಪನ್ಯಾಸ ಆಲಿಸಿದರು.