ಆರ್ಯ ವೈಶ್ಯ ಅಭಿವೃದ್ಧಿ ನಿಗಮದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ; ಸಚಿವ ಕೃಷ್ಣಬೈರೇಗೌಡ

0
9

ಬೆಂಗಳೂರು; ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಆಯ್ಕೆಯಾದ ಎಲ್ಲಾ 500 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು  ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ವಿಕಾಸಸೌಧದ ಕಚೇರಿಯಲ್ಲಿ ಆರ್ಯ ವೈಶ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ದೀಪಾಶ್ರೀ. ಕೆ ಅವರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಆರ್ಯ ವೈಶ್ಯ ನಿಗಮದ ಡಿಬಿಟಿ ಪ್ರಕ್ರಿಯನ್ನು ಪೂರ್ಣಗೊಳಿಸಿದರು. ಈ ಮೂಲಕ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ 500 ಫಲಾನುಭವಿಗಳಿಗೆ ರೂ.5.00ಕೋಟಿ ಸಾಲ-ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ವರ್ಗಾವಣೆ ಮಾಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ಅವರು, ಹೊಸ ಉದ್ಯಮಿಗಳಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ನಿಗಮವು ಗಮನಾರ್ಹವಾದ ಕೆಲಸ ನಿರ್ವಹಿಸುತ್ತಿದೆ. ಒಂದು ಲಕ್ಷದವರೆಗೆ ವಾರ್ಷಿಕ 4ರ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಾಗುತ್ತಿದ್ದು, ಎಲ್ಲರೂ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.

“ಆರ್ಯ ವೈಶ್ಯ ನಿಗಮವು 2023-24ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ನಿ)ಕ್ಕೆ ಬಿಡುಗಡೆಯಾದ ರೂ.10.00ಕೋಟಿ ಅನುದಾನದಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಸಮಿತಿ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನವ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚುವ ಗಮನಾರ್ಹ ಕೆಲಸಕ್ಕೆ ನಿಗಮವು ಮುಂದಾಗಿದೆ” ಎಂದು ಸಂಸತ ವ್ಯಕ್ತಪಡಿಸಿದರು.

“ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ ರೂ.20,000/-ಸಹಾಯಧನ ಹಾಗೂ ರೂ.80,000/-ಸಾಲ ಬಿಡುಗಡೆ ಮಾಡಿದ್ದು, ಫಲಾನುಭವಿಯು ಸಾಲವನ್ನು ಶೇ.4ರಷ್ಟು ಬಡ್ಡಿ ದರದಲ್ಲಿ ಮರುಪಾವತಿಯನ್ನು KACDC  ಆಪ್ ಮೂಲಕ ಮರುಪಾವತಿಸಲು ಅವಕಾಶವಿರುತ್ತದೆ. ಆರ್ಯ ವೈಶ್ಯ ಈ ಸೌಲಭ್ಯವನ್ನು ನೀಡುತ್ತಿರುವ ಏಕೈಕ ನಿಗಮವಾಗಿದ್ದು, ಎಲ್ಲಾ ಫಲಾನುಭವಿಗಳು ತಮ್ಮ ಇ-ಮೇಲ್‍ನಲ್ಲಿ ಸ್ವಯಂ ಚಾಲಿತ ಸಾಲ ಮಂಜೂರಾತಿ ಆದೇಶ ಪತ್ರವನ್ನು ಪಡೆಯಬಹುದಾಗಿರುತ್ತದೆ” ಎಂದರು.

“ಇಲ್ಲಿಯವರೆಗೂ ನಿಗಮಕ್ಕೆ ರೂ.4.57 ಕೋಟಿ ಮರುಪಾವತಿ ಮೊತ್ತ ಸ್ವೀಕೃತಿಯಾಗಿದೆ. ಸಾಲ ಪಡೆದಂತಹ ಎಲ್ಲಾ ಫಲಾನುಭವಿಗಳು ಸಾಲವನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಆರ್ಯ ವೈಶ್ಯ ನಿಗಮವು  ರಾಜ್ಯದಲ್ಲೇ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಡಿಬಿಟಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಮೊದಲ ನಿಗಮವಾಗಿದೆ ಎಂದು ತಿಳಿಸಿದರು.

“ನಿಗಮವು ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ಸಕಾಲದಲ್ಲಿ ಎಲ್ಲಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಪ್ರಶಂಸನೀಯ” ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಮೆಚ್ಚುಗೆ ಸೂಚಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾದ ಶ್ರೀಮತಿ ದೀಪಶ್ರೀ. ಕೆ ಅವರು ಆಹಾರ ವಾಹಿನಿ ಯೋಜನೆಯಡಿಯಲ್ಲಿ ಆಯ್ಕೆಯಾದ 40 ಫಲಾನುಭವಿಗಳಿಗೆ ಹಾಗೂ ವಾಸವಿ ಜಲಶಕ್ತಿ ಯೋಜನೆಯಡಿಯಲ್ಲಿ ಆಯ್ಕೆಯಾದ 36 ಫಲಾನುಭವಿಗಳಿಗೆ ಶೀಘ್ರದಲ್ಲಿ ಸಾಲ-ಸಹಾಯಧನದ ಮೊತ್ತವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.

ಆರ್ಯ ವೈಶ್ಯ ನಿಗಮದ ಯೋಜನೆಗಳ ಮಾಹಿತಿ:

ಯೋಜನೆಗಳ ಸಾಮಾನ್ಯ ಮಾರ್ಗಸೂಚಿಗಳು: ಆರ್ಯ ವೈಶ್ಯ ಸಮುದಾಯದವರು ನಮೂನೆ-“ಜಿ”ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅಭ್ಯರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಬೇಕು. ಯೋಜನೆಗಳಲ್ಲಿ ಮಹಿಳೆಯರಿಗೆ ಶೇ.33%, ವಿಕಲಚೇತನರಿಗೆ ಶೇ.5% ಹಾಗೂ ತೃತೀಯ ಲಿಂಗಳಿಗೆ ಶೇ.5% ಮೀಸಲಾತಿ ಇರುತ್ತದೆ. ಎಲ್ಲಾ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: ಸ್ವಯಂ ಉದ್ಯೋಗ ನೇರಸಾಲ ಯೋಜನೆಯಲ್ಲಿ ವ್ಯಾಪಾರ ಕೈಗೊಳ್ಳಲು ನಿಗಮದಿಂದ ಒಂದು ಲಕ್ಷ ಸಾಲ-ಸಹಾಯಧನ ನೀಡಲಾಗುವುದು. ಇದರಲ್ಲಿ ಇಪ್ಪತ್ತು ಸಾವಿರ ಸಹಾಯಧನ ಹಾಗೂ ಎಂಬತ್ತು ಸಾವಿರ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ ಮೂರು ಲಕ್ಷ ಮಿತಿ ಒಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 45 ವರ್ಷದೊಳಗಿನವರಾಗಿರಬೇಕು. ಪಡೆದ ಸಾಲವನ್ನು 3 ವರ್ಷಗಳಲ್ಲಿ ಮರುಪಾವತಿ ಮಾಡಬೇಕು.

ಅರಿವು ಶೈಕ್ಷಣಿಕ ಸಾಲ ಯೋಜನೆ: ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಅಥವಾ ನೀಟ್ ಪ್ರವೇಶ ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಒಂದು ವರ್ಷಕ್ಕೆ ಒಂದು ಲಕ್ಷ ಶೇ.2ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ ಆರು ಲಕ್ಷ ಮಿತಿ ಒಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿರಬೇಕು. ಒಂದು ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ವಿದ್ಯಾರ್ಥಿಯು ವ್ಯಾಸಂಗ ಪೂರ್ಣಗೊಂಡ 4 ತಿಂಗಳ ನಂತರ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ ಮರು ಪಾವತಿಸಬೇಕು.

ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ: ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆಯಡಿಯಲ್ಲಿ ಚಾಟ್ಸ್, ಹುರಿದ ತಿನಿಸುಗಳು, ಜ್ಯೂಸ್/ಕಾಫಿ-ಟೀ ಇತ್ಯಾದಿಗಳನ್ನು ಮೊಬೈಲ್ ಕ್ಯಾಂಟೀನ್ನಲ್ಲಿ ವ್ಯಾಪಾರ ಮಾಡಲು ನಿಗಮದಿಂದ ಎರಡು ಲಕ್ಷ ಸಹಾಯಧನ ನೀಡಲಾಗುವುದು ಹಾಗೂ ಬಾಕಿ ಮೊತ್ತವನ್ನು ಬ್ಯಾಂಕ್/ಸಹಕಾರಿ ಸಂಘಗಳಿಂದ ಸಾಲ ಪಡೆಯಬಹುದಾಗಿದೆ. ಅರ್ಜಿದಾರರ ವಾರ್ಷಿಕ ಆದಾಯ ಆರು ಲಕ್ಷ ಮಿತಿ ಒಳಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು. ಅಭ್ಯರ್ಥಿಯು ಹೊಸ ವಾಹನ ಖರೀದಿಸಬೇಕು ಹಾಗೂ Food grade steel  ಬಳಸಬೇಕು. ಅಭ್ಯರ್ಥಿ Franchise    ಪಡೆಯಲು ಸಹ ಅವಕಾಶವಿರುತ್ತದೆ. ನಿಗಮದಿಂದ ಉಚಿತ ಮಾರ್ಕೆಟಿಂಗ್ ತರಬೇತಿ ನೀಡಲಾಗುವುದು.

ವಾಸವಿ ಜಲಶಕ್ತಿ ಯೋಜನೆ: ವಾಸವಿ ಜಲಶಕ್ತಿ ಯೋಜನೆಯಡಿಯಲ್ಲಿ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಶೇ.4ರ ಬಡ್ಡಿ ದರದಲ್ಲಿ ಎರಡು ಲಕ್ಷ ಸಾಲ ಹಾಗೂ ವಿದ್ಯುದ್ಧೀಕರಣಕ್ಕೆ ಐವತ್ತು ಸಾವಿರ ಸಹಾಯಧನ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ ಆರು ಲಕ್ಷ ಮಿತಿ ಒಳಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನವರಾಗಿರಬೇಕು. ಅರ್ಜಿದಾರರು ಒಂದೇ ಸ್ಥಳದಲ್ಲಿ 2 ರಿಂದ 5 ಎಕರೆ ಜಮೀನು ಹೊಂದಿರಬೇಕು. ಸಾಲ ಪಡೆಯಲು ಯಾವುದೇ Collateral Security  ಇರುವುದಿಲ್ಲ.

FRUITS (Farmers Registration and Unified Beneficiary Information System)  ಅಭ್ಯರ್ಥಿಯು ಕಡ್ಡಾಯವಾಗಿ FRUITS   ಐ.ಡಿಯನ್ನು ರೈತ ಮಿತ್ರ ಕೇಂದ್ರಗಳಲ್ಲಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here