’ಕಾಯಕ ದಾಸೋಹ ಸಮರಸದ ಕ್ರಿಯೆ’

0
36

ಮಹಾದಾಸೋಹಿ ಶರಣಬಸವೇಶ್ವರರು ’ಕಾಯಕ ದಾಸೋಹ ಸಮರಸದ ಕ್ರಿಯೆ’ ತೋರಿಸಿದವರು ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಇತಿಹಾಸ ಸಹ ಪ್ರಾಧ್ಯಾಪಕರಾದ ಡಾ.ಸುರೇಶಕುಮಾರ ನಂದಗಾಂವ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಒಬ್ಬ ಬಡಭಕ್ತ ಶರಣರಲ್ಲಿ ಬಂದು ’ ಯಪ್ಪಾ ಮಗಳ ಮದುವೆ ಮಾಡಬೇಕಾಗಿದೆ, ದುಡ್ಡಿಲ್ಲಪ್ಪಾ’ ಎಂದು ನಿವೇದಿಸಿಕೊಳ್ಳುತ್ತಾನೆ. ಅಲ್ಲಿಯೇ ಇದ್ದ ವಿಭೂತಿ ಉಂಡೆಯನ್ನು ಅವನಿಗೆ ಕೊಟ್ಟು ಇದರಿಂದ ನಿನ್ನ ಮಗಳ ಮದುವೆ ಮಾಡು ಹೋಗು ಎನ್ನುತ್ತಾರೆ. ಆ ಭಕ್ತನು ಏನೂ ಎಂತು ಎಂದು ಕೇಳದೆ ಅದನ್ನು ಬಹು ಭಕ್ತಿಯಿಂದ ತೆಗೆದುಕೊಂಡು ಮನೆಗೆ ಹೋಗುತ್ತಾನೆ. ದಾರಿಯಲ್ಲಿ ಆಗರ್ಭ ಶ್ರೀಮಂತನೊಬ್ಬನ ಏಕೈಕ ಪುತ್ರ ಹದಿನೆಂಟು ವರ್ಷದ ಹುಡುಗ ಪತಂಗ ಹಾರಿಸುತ್ತಾ ಮಾಳಿಗೆಯ ಮೇಲಿಂದ ಕೆಳಗೆ ಬೀಳುತ್ತಾನೆ. ತಲೆ ಒಡೆದು ರಕ್ತ ಹರಿಯಲು ಪ್ರಾರಂಭಿಸುತ್ತದೆ. ತಂದೆ ತಾಯಿ ಅಳುತ್ತಿರುತ್ತಾರೆ. ಇನ್ನೇನು ಹುಡುಗನ ಪ್ರಾಣ ಹೋಗುತ್ತಿದೆ ಎನ್ನುವಾಗ ಆ ಬಡವ ’ ಯಪ್ಪಾ ಶರಣ ಅದಕ್ಕಾಗಿಯೇ ವಿಭೂತಿ ಕೊಟ್ಟೆಯಪ್ಪಾ ’ ಎನ್ನುತ್ತಾ ಆ ವಿಭೂತಿಯನ್ನು ಒಡೆದ ಬಾಲಕನ ಬಾಯೊಳಗೆ ಹಾಕುತ್ತಾನೆ, ಹಣೆಗಚ್ಚುತ್ತಾನೆ. ಹರಿಯುತ್ತಿರುವ ರಕ್ತ ನಿಂತಿತಲ್ಲದೆ ಆ ಹುಡುಗ ಚೇತರಿಸಿಕೊಂಡು ಎದ್ದು ಕುಳಿತ. ಸಂತೋಷ ಪಟ್ಟ ಆ ಸಾಹುಕಾರ ತನ್ನ ಅರ್ಧ ಆಸ್ತಿಯನ್ನೆ ಈ ಬಡವನಿಗೆ ಜಾಗದ ಮೇಲೆ ಕೊಟ್ಟು ಬಿಟ್ಟ. ಶರಣಬಸವರ ಕೃಪೆ ಇದು ಎಂದು ಭಾವಿಸಿದ್ದ ಆ ಬಡವ ಮಗಳ ಮದುವೆ ಮಾಡಿದ.

ಕಲಬುರಗಿ ಹೊರವಲಯದಲ್ಲಿ ದಂಪತಿಗಳಿಬ್ಬರು ಶರಣರ ಭಕ್ತರಾಗಿ ಬಾಳುತ್ತಿದ್ದರು. ಒಂದು ದಿನ ಗುಡಿಸಲಿನ ಹೊರಗೆ ದಂಪತಿಗಳು ತಮ್ಮ ಕಾಯಕದಲ್ಲಿ ನಿರತರಾಗಿದ್ದರು. ಎರಡು ವರ್ಷದ ಮಗುವಿಗೆ ಒಳಗೆ ಮಲಗಿಸಿದ್ದಾರೆ. ಆದರೆ ದೇವರ ಮುಂದೆ ಹಚ್ಚಿದ್ದ ದೀಪದ ಹಣತೆ ಬಿದ್ದು ಅದರ ಉರಿ ಗುಡಿಸಲಿಗೆ ಹತ್ತಿಕೊಳ್ಳುತ್ತದೆ. ತಿರುಗಿ ನೋಡುತ್ತಾರೆ. ಅದು ಉರಿಯುತ್ತಿರುತ್ತದೆ. ಆಗ ಎದ್ದು ’ ಯಪ್ಪಾ ಶರಣಾ’ ಎಂದು ಶರಣರ ನಾಮಸ್ಮರಣೆ ಮಾಡುತ್ತಾ ಒಳಗೆ ಹೋಗಿ ಹೊರಗೆ ಮಗುವನ್ನು ಹೂವಿನಂತೆ ತೆಗೆದುಕೊಂಡು ಬರುತ್ತಾರೆ. ಇಬ್ಬರಿಗೂ ಏನೇನು ಆಗಿರುವುದಿಲ್ಲ. ಇದೆಲ್ಲ ಶರಣರ ಕೃಪೆ ಎಂದೇ ಭಾವಿಸಿದ ದಂಪತಿಗಳು ಶರಣರ ಪಾದಕ್ಕೆ ಎರಗುತ್ತಾರೆ.

ಶರಣಬಸವರು ಸುಮಾರು ಎರಡಮೂರು ತಾಸು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದಾಗ ಹಾವೊಂದು ಕಿಟಕಿಯಿಂದ ಸರಸರನೆ ಬಂದು ಶರಣರ ಹತ್ತಿರ ಬಂದು ಅವರ ಮೈಮೇಲೆ ಹರಿದಾಡುತ್ತದೆ. ದೊಡ್ಡದಾದ ಹಾವು ಶರಣರ ಮೈ ಹೊಟ್ಟೆ ಸುತ್ತಿಕೊಂಡು ತಲೆಯ ಮೇಲೆ ಹೆಡೆ ಹಾಕಿಕೊಂಡು ಕುಳಿತುಕೊಳ್ಳುತ್ತದೆ. ಅಲ್ಲಿಗೆ ಬಂದ ಭಕ್ತರು ನೋಡಿ ನಡುಗಲು ಪ್ರಾರಂಭಿಸಿ ಓಡೋಡಿ ದೊಡ್ಡಪ್ಪ ಶರಣರಿಗೆ ನೀಲಮ್ಮ ತಾಯಿಯವರಿಗೆ ತಿಳಿಸುತ್ತಾನೆ. ಶರಣರು ಕಣ್ಣು ತೆರೆಯುತ್ತಿಲ್ಲ. ಹಾವು ಕೆಳಗಿಳಿಯುತ್ತಿಲ್ಲ. ಶರಣರು ಸಾವಕಾಶವಾಗಿ ಲೌಕಿಕದತ್ತ ಮರಳುತ್ತಾರೆ. ಶರಣರು ’ ಆಯಿತು ನಾಗಪ್ಪಾ ಹೋಗು ಇಲ್ಲಿಂದ , ಮತ್ತೊಮ್ಮೆ ಬರಬೇಡ’ ಎನ್ನಲು ಸರಸರನೆ ಹೋಗಿಬಿಡುತ್ತದೆ.

ಶರಣಬಸವರ ಎದರಿಗೆ ಮುದುಕಿಯೋರ್ವಳು ಬಂದು ನಿಲ್ಲುತ್ತಾಳೆ. ಅವಳ ಹರಿದ ಸೀರೆ, ಕುಪ್ಪಸ ಕೆದರಿದ ತಲೆ, ಅನ್ನವಿಲ್ಲದ ಮುಖ. ಶರಣರು ಅವಳಿಗೆ ಬಟ್ಟೆ ಅನ್ನದ ವ್ಯವಸ್ಥೆ ಮಾಡಿಸುತ್ತಾರೆ. ಅವಳು ಮನೆಗೆ ಹೋದಾಗ ಸೊಸೆ ಆ ಸೀರೆಗೆ ಬೆಂಕಿ ಹಚ್ಚುತ್ತಾಳೆ. ಆ ಬೆಂಕಿ ಸೊಸೆಯ ಸೀರೆಗೆ ಹತ್ತುತ್ತದೆ. ಮತ್ತೆ ಆ ಮುದುಕಿ ಶರಣಾ ಎಂದು ಬೇಡಿಕೊಂಡಾಗ ಬೆಂಕಿ ಆರಿ ಹೋಗುತ್ತದೆ. ಹೀಗೆ ಶರಣಬಸವರು ಅನೇಕ ಲೀಲೆಗಳನ್ನು ಮಾಡಿ ಸತ್ಪುರುಷರಾಗಿದ್ದಾರೆ ಎಂದು ಡಾ.ನಂದಗಾಂವ ಹೇಳಿದರು.

ಡಾ.ಸುರೇಶಕುಮಾರ ನಂದಗಾಂವ, ಸಹ ಪ್ರಾಧ್ಯಾಪಕರಾದ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here