ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಜಾತ್ಯತೀತವಾಗಿ ಗೌರವಿಸಬೇಕು ಅವರು ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ ಪಟ್ಟಭದ್ರರು ಎಷ್ಟೇ ಕಷ್ಟ ತೊಂದರೆ ತಾಪತ್ರೆ ಕೊಟ್ಟರೂ ಕೂಡ ಯಾವುದೇ ರಾಗ ದ್ವೇಷವಿಲ್ಲದೆ ತಾವು ಬರೆದ ಸಂವಿಧಾನದಲ್ಲಿ ಈ ದೇಶದ ಎಲ್ಲ ಜಾತಿ ಜನಾಂಗಕ್ಕೆ ಸಮಾನ ನ್ಯಾಯ ನೀಡಿದ ಮಹಾನ್ ಮಾನವತಾವಾದಿ ಎಂದು ಕರ್ನಾಟಕ ರಾಜ್ಯ ತಳವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸಾಧು-ಸಂತರು, ಫಕೀರರು ಸಾಮಾಜಿಕ ನ್ಯಾಯವಾದಿಗಳು ಮತ್ತು ಪ್ರಗತಿಪರ ಚಿಂತಕರನ್ನು ಒಂದು ಜಾತಿ, ಕೋಮಿಗೆ ಸೀಮಿತಗೊಳಿಸಬಾರದು. ಅವರು ತಮ್ಮ ಉದಾತ್ತವಾದ ಚಿಂತನೆಯಿಂದ ಜಾತಿ, ಮತ, ಪಂಥ ಎಣಿಸದೆ ಸಾಮಾಜಿಕ ಕಳಕಳಿಯಿಂದ ಎಲ್ಲರ ಸಮಾನತೆಗಾಗಿ, ಅಭಿವೃದ್ಧಿಗಾಗಿ ತಮ್ಮ ಜೀವವನ್ನೇ ಸವಿಸಿದ್ದಾರೆ.
ಇವರೆಲ್ಲರಲ್ಲಿಯೂ ಆಗ್ರಪಂತಿಯಲ್ಲಿ ನಿಲ್ಲುವರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಮಹಿಳೆಯರು, ದೀನ-ದಲಿತರು ಅಲ್ಪಸಂಖ್ಯಾತರು ಸೇರಿದಂತೆ ಈ ದೇಶದ ಪ್ರತಿಯೊಂದು ಧರ್ಮ, ಜಾತಿಯ ಜನರು ಇವತ್ತು ಮೀಸಲಾತಿಯನ್ನು ಪಡಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಅಂಬೇಡ್ಕರ್ ಅವರು.
ಇಂತಹ ಸಾಮಾಜಿಕ ನ್ಯಾಯದ ಹರಿಕಾರರಾದ ಅಂಬೇಡ್ಕರ್ ಅವರು ಎಲ್ಲಾ ಸಮುದಾಯದ ಜಾತಿ-ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರನ್ನು ಉದ್ದೇಶ ಪೂರಕವಾಗಿ ರಾಜಕೀಯ ದೃಷ್ಟಿಯಿಂದ ಒಂದು ಜಾತಿಗೆ ಕೋಮಿಗೆ ಸೀಮಿತಗೊಳಿಸಿ ಅಪಮಾನ ಗೊಳಿಸುವುದು ಅತ್ಯಂತ ಅಪಾಯಕಾರಿ, ಇಂಥ ಹೀನ ಕೃತ್ಯ ವನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ಧರ್ಮರಹಿತವಾಗಿ ಖಂಡಿಸಬೇಕು ಎಂದು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.