ಕಲಬುರಗಿ; ಈಗಾಗಲೇ ಕಲ್ಯಾಣ ಕರ್ನಾಟಕದ ಭಾಗದಲ್ಲಿರುವ 7 ಜಿಲ್ಲೆಗಳಲ್ಲಿನ ಶಾಲಾ ಮೂಲ ಸವಲತ್ತು ಸುಧಾರಣೆಗೆ ಅಕ್ಷರ ಅವಿಷ್ಕಾರ ಯೋಜನೆಯೊಂದಿಗೆ ದಾಪುಗಲು ದಾಪುಗಾಲು ಹಾಕುತ್ತಿರುವ ಕೆಕೆಆರ್ಡಿಬಿ ಇದೀಗ ಕಲಿಕೆಯಲ್ಲಿ ಮಂದಗತಿಯಲ್ಲಿರುವ ಮಕ್ಕಳಿಗೆ ಗುರುತಿಸಿ ಅಂತಹವರಿಗೆ ಹೆಚ್ಚುವರಿ ಓದಿಗಾಗಿ ಹೊತ್ತಿಗೆಗಳನ್ನು ನೀಡುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೆಕೆಆರ್ಡಿಬಿಯ ಇಂತಹ ಹಲವು ಉಪಕ್ರಮಗಳಲ್ಲಿ ಒಂದಾದ ಪ್ರೌಢಶಾಲೆಗಳಲ್ಲಿರುವ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಯಾವ ಮಕ್ಕಳು ಕಲಿಕೆಯಲ್ಲಿ ಮಂದಗತಿಯಲ್ಲಿದ್ದಾರೋ ಅವರನ್ನು ಗುರುತಿಸಿ, ಅಂತಹ ಮಕ್ಕಳಿಗಾಗಿ ಪೂರಕ ಓದಿಗಾಗಿ ಕಲಿಕಾ ಆಸರೆ ಪುಸ್ತಕ ಮುದ್ರಿಸಿ ಹಂಚಲಾಗುತ್ತಿದೆ.
ಹಳ್ಳಿಯಲ್ಲಿರುವ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮ ಇದಾಗಿದೆ. ಕೆಕೆಆರ್ಡಿಬಿಯಿಂದ ಕಲ್ಯಾಣ ನಾಡಿನಲ್ಲಿರುವ 7 ಜಿಲ್ಲೆಗಳ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೈಗೆತ್ತಕೊಂಡಿರುವ ಕಲಿಕಾ ಆಸರೆ ಪುಸ್ತಕ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಇದೇ ಜ. 26 ರ ಗಣರಾಜ್ಯೋತ್ಸವ ದಿನದಂದು ಕಲಬುರಗಿ ಕೆಕೆಆರ್ಡಿಬಿ ಅಭಿವೃದ್ಧಿ ಭವನದಲ್ಲಿ ಚಾಲನೆ ನೀಡಲಾಗುತ್ತಿದೆ.
ಕೆಕೆಆರ್ಡಿಬಿ ಅಧ್ಯಕ್ಷರಾದ ಡಾ. ಅಜಯ್ ಧರ್ಮಸಿಂಗ್ ಅವರು ಕಲಿಕಾ ಆಸರೆ ಹೆಚ್ಚುವರಿ ಕಲಿಕೆಯ ಪೂರಕ ಪುಸ್ತಕಗಳನ್ನು ವಿದ್ಯಾರ್ಥಿಗಳಿಗಾಗಿ ಅರ್ಪಿಸಲಿದ್ದಾರೆ. ಕೆಕೆಆರ್ಡಿಬಿ ಕಚೇರಿಯ ಸಭಾಂಗಣದಲ್ಲಿ ಜ. 26 ರಂದು ಮಧ್ಯಾಹ್ನ 12. 15 ಗಂಟೆಗೆ ಈ ಸಮಾರಂಭ ನಡೆಯುತ್ತಿದೆ. ಕೆಕೆಆರ್ಡಿಬಿ ಕಾರ್ಯದರ್ಶಿ ಸುಂದರೇಶ ಬಾಬೂ, ಕಲಬುರಗಿ ಶಿಕ್ಷಣ ಆಯುಕ್ತಾಲಯದ ಅಪರ ಆಯುಕ್ತ ಡಾ. ಆಕಾಶ ಶಂಕರ, ಶಾಲೆಯ ಮಕ್ಕಳು, ಕೆಕೆಆರ್ಡಿಬಿ ಸಿಬ್ಬಂದಿ ವರ್ಗ ಉಪಸ್ಥಿತರಿರುತ್ತಾರೆ.