ಕಲಬುರಗಿ: ಮಾರ್ಚ್ 6 ರಂದು ಬರಗಾಲ ಘೋಷಣೆಯಾಗಿ ಸುಮಾರು ತಿಂಗಳು ಕಳೆದರೂ ಕೂಡ ಬರಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿಗಳು ಇನ್ನೂ ಆರಂಭವಾಗದಿರುವುದಕ್ಕೆ ಜಿಲ್ಲಾಡಳಿತದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರಶಾಂತಗೌಡ ಆರ್.ಮಾಲಿಪಾಟೀಲ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬೇಸಿಗೆ ಆರ0ಭವಾಗಿದ್ದು ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಆದರೆ ಅಧಿಕಾರಿಗಳು ಮಾತ್ರ ಹವಾ ಕೋಣೆಯಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಬರ ಘೋಷಣೆಯಾಗಿದೆ ಅಷ್ಟೇ ಗ್ರಾಮೀಣ ಭಾಗದಲ್ಲಿ ಮೇವು ನೀರಿನ ಕೊರತೆಯಿಂದ ರೈತರು ತಮ್ಮ ದನಕರುಗಳನ್ನು ಹಗ್ಗದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದರು.
ಭೀಮಾ ನದಿಯಲ್ಲಿ ನೀರಿಲ್ಲದೆ ಜಲಚರ ಹಾಗೂ ಮೀನುಗಳು ಸಾವನ್ನೊಪ್ಪಿವೆ ಭೀಮಾ ನದಿಯಲ್ಲಿ ನೀರಿಲ್ಲದಿರುವ ಕಾರಣ ನದಿ ಭಾಗದ ಹಳ್ಳಿಗಳ ಜನರು ಆತಂಕದಲ್ಲಿದ್ದಾರೆ.ಕೂಡಲೇ ಭೀಮಾ ನದಿಗೆ ನೀರು ಹರಿಸುವುದರ ಜೊತೆಗೆ ಪ್ರತಿ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಗೋಶಾಲೆ ಸ್ಥಾಪನೆ ದನಕರುಗಳಿಗೆ ಕುಡಿಯಲು ನೀರಿನ ತೊಟ್ಟೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಪರಿಹಾರದ ಹಣ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಅಧಿಕಾರಿಗಳು ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ಜಿಲ್ಲಾಡಳಿತದ ಕಚೇರಿ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಶಾಂತಗೌಡ ಆರ್.ಮಾಲಿಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.