ಅಫಜಲಪುರ ನೀರಿಗೆ ಆಹಾಕಾರ: ನಾಟಿಕಾರ್ ಅಮರಣಾಂತ ಉಪವಾಸ ಸ್ಥಳಕ್ಕೆ ಸಂಸದ ಜಾಧವ್ ಭೇಟಿ

0
13

ಅಫಜಲಪುರ: ತಾಲೂಕಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ತಲೆದೋರಿದ್ದು ಕೃಷಿ ಭೂಮಿ ಒಣಗಿದ್ದು ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಶಿವಕುಮಾರ್ ನಾಟಿಕಾರ್ ಅಮರಣಾಂತ ಉಪವಾಸವನ್ನು ಕೊನೆಗೊಳಿಸಬೇಕೆಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಸರಕಾರಕ್ಕೆ ಮನವಿ ಮಾಡಿದ್ದಾರೆ .

ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ಮುಖಂಡರಾದ ಶಿವ ಕುಮಾರ್ ನಾಟಿಕಾರ್ ಅವರು ಮಾರ್ಚ್ 15ರಿಂದ ಭೀಮಾ ನದಿಗೆ ನೀರು ಹರಿಸಿ ಕುಡಿಯಲು ನೀರು ಕುಡಿ ಹಾಗೂ ರೈತರ ಜೀವ ಉಳಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟು ಆರಂಭಿಸಿದ ಅಮರಣಾಂತ ಉಪವಾಸ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶಿಸಿ ಐದು ದಿನಗಳಿಂದ ನಡೆಸುವ ಉಪವಾಸ ಮುಷ್ಕರವನ್ನು ಕೊನೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಚಾವತ್ತು ವರದಿಯಲ್ಲಿ 15 ಟಿಎಂಸಿ ನೀರನ್ನು ಬಳಸಲು ಕರ್ನಾಟಕ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಉಜಿನಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿದ್ದರೆ ಮಾನವೀಯ ದೃಷ್ಟಿಯಲ್ಲಿ ಕುಡಿಯಲು ನೀರು ಪೂರೈಸುವುದಕ್ಕಾಗಿ ಭೀಮಾ ನದಿಗೆ ನೀರು ಹರಿಬಿಡಬೇಕು ಎಂದು ಅವರು ಮನವಿ ಮಾಡಿದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಲಬುರ್ಗಿ ಜಿಲ್ಲಾಧಿಕಾರಿಗಳ ಮೂಲಕ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ಮಾಡಲು ಪ್ರಯತ್ನಿಸಲಾಗುವುದು ಇದಕ್ಕಾಗಿ ಅಫಜಲ್ಪುರದ ಸರ್ವ ಪಕ್ಷಗಳ ಸದಸ್ಯರ ಜೊತೆ ಅಗತ್ಯವಿದ್ದಲ್ಲಿ ಬೆಂಗಳೂರಿಗೆ ನಿಯೋಗ ತೆರಳಲು ಸಿದ್ಧ ಎಂದು ಹೇಳಿದರು.

ಕಾನೂನಾತ್ಮಕ ಕ್ರಮವನ್ನು ರಾಜ್ಯ ಸರ್ಕಾರವೇ ಕೈಗೊಳ್ಳಬೇಕಾಗಿರುವುದರಿಂದ ಮಾನವೀಯತೆಯ ದೃಷ್ಟಿಯಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಿ ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.

ಸತ್ಯಾಗ್ರಹ ಸ್ಥಳದಲ್ಲಿ ವೈದ್ಯರಾದರು ಜಾಧವ್: ಸತ್ಯಾಗ್ರಹ ಸ್ಥಳದಲ್ಲಿ ಕಳೆದ ಐದು ದಿನಗಳಿಂದ ಅಮರಣಾಂತ ಉಪವಾಸ ನಡೆಸುತ್ತಿರುವ ಶಿವಕುಮಾರ್ ನಾಟಿಕಾರ್ ಅವರ ಆರೋಗ್ಯ ಸ್ಥಿತಿ ಏರುಪೇರಾಗಿರುವುದರಿಂದ ಡಾ. ಉಮೇಶ್ ಜಾಧವ್ ಅವರು ಪರೀಕ್ಷೆ ಮಾಡಿ ತಮ್ಮ ಮೂಲ ವೈದ್ಯ ವೃತ್ತಿಯನ್ನು ಮಾಡಿ ಜನ ಪ್ರೀತಿಗೆ ಪಾತ್ರರಾದರು.

ನಾಟಿಕಾರ್ ಅವರ ಬಿಪಿ, ಶುಗರ್ ಸೇರಿದಂತೆ ಆರೋಗ್ಯ ಸ್ಥಿತಿಯನ್ನು ಪರೀಕ್ಷೆ ಮಾಡಿದ ಜಾಧವ್ ತಕ್ಷಣದಲ್ಲೇ ತಾಲೂಕು ಸರಕಾರಿ ವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಕರೆಸಿ ವಿಪರೀತವಾಗಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಿರುವುದರಿಂದ ತಕ್ಷಣದಲ್ಲೇ ಆರೋಗ್ಯ ಕಾಪಾಡಲು ವೈದ್ಯಕೀಯ ಸಲಹೆಯನ್ನು ನೀಡಿದರು.

ಅಮರಣಾಂತ ಉಪವಾಸ ಮುಂದುವರಿಸಿದಲ್ಲಿ ದೇಹವು ಗಂಭೀರ ಸ್ಥಿತಿಗೆ ತಲುಪುವ ಎಚ್ಚರಿಕೆಯನ್ನು ನೀಡಿದರಲ್ಲದೆ ಕೂಡಲೇ ಸರಕಾರ ಸ್ಪಂದನೆ ಮಾಡದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ ಎಂದು ಸಲಹೆಯಿತ್ತರು.

ನಾಟಿಕಾರ್ ಅವರನ್ನು ಬೆಂಬಲಿಸಿ ಸರ್ವ ಪಕ್ಷಗಳ ನಾಯಕರು ಮತ್ತು ಅಭಿಮಾನಿಗಳು ಅಂಬೇಡ್ಕರ್ ವೃತ್ತದ ನಿರಶನ ಸ್ಥಳಕ್ಕೆ ಭೇಟಿ ಮಾಡಿ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿರುವುದು ಕಂಡುಬಂತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here