ಅಫಜಲಪುರ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ನೀಡದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶಗೊಂಡ ಕೂಲಿ ಕಾರ್ಮಿಕರು ಗ್ರಾಪಂಗೆ ಗುದ್ದಲಿ ,ಬುಟ್ಟಿ ಸಮೇತ ಆಗಮಿಸಿ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.
ತಾಲೂಕಿನ ದೇವಲ ಗಾಣಗಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ದಿನನಿತ್ಯ ನಾವು ಕೂಲಿ ಕೆಲಸಕ್ಕೆ ಬಂದು ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಕೆಲಸದ ಸಮಯದಲ್ಲಿ ನೀರು ಸಹ ಕೊಡುತ್ತಿಲ್ಲ.ಅಲ್ಲದೇ ಜಾಬ್ ಕಾರ್ಡ್ ವಿತರಣೆ ಮಾಡದೆ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದಾರೆ.
ಸರಕಾರದಿಂದ 100 ದಿನ ಕೂಲಿ ಕೆಲಸ ನೀಡಬೇಕೆಂದು ಆದೇಶವಿದ್ದರೂ ಸಹ ನಮಗೆ ಕೆಲಸ ಕೊಡದೆ ಸತಾಯಿಸುತ್ತಿದ್ದಾರೆ.ಈ ಬಾರಿ ಬರಗಾಲ ಆವರಿಸಿದೆ. ಮಳೆ ಇಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ.ಕೃಷಿ ಚಟುವಟಿಕೆಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಈ ಭಾಗದ ಜನರಿಗೆ ಕೆಲಸ ಇಲ್ಲದಂತಾಗಿ ಬದುಕು ಸಾಗಿಸುವುದೇ ಕಷ್ಟಕರವಾಗಿದೆ.
ತಾಲೂಕಿನ ಎಷ್ಟೋ ಗ್ರಾಮಗಳಲ್ಲಿ ಕೆಲಸ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೆ ಬದುಕು ಸಾಗಿಸುವ ಉದ್ದೇಶದಿಂದ ಗ್ರಾಮಗಳನ್ನು ತೊರೆದು ಮಹಾನಗರಗಳಿಂದ ಗೂಳೆ ಹೋಗುತ್ತಿದ್ದಾರೆ.ಬರಗಾಲದಲ್ಲಿ ಜನರಿಗೆ ನೆರವಾಗುವ ಉದ್ದೇಶದಿಂದ ಸರಕಾರ ಉದ್ಯೋಗ ಖಾತರಿ ಯೋಜನೆ ಜಾರಿ ಮಾಡಿದೆ.
ಒಳ್ಳೆಯ ಉದ್ದೇಶದಿಂದ ಜಾರಿಯಾಗಿರುವ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಿಯಾಗಿ ಬಳಕೆಯಾಗದೆ ದುರಪಯೋಗವಾಗುತ್ತಿದೆ ಎಂದು ಪ್ರತಿಭಟನಾ ನಿರತ ಕೂಲಿ ಕಾರ್ಮಿಕರು ಮಹಿಳೆಯರು ದೂರಿದರು.
ನಂತರ ಗ್ರಾಪಂಗೆ ಆಗಮಿಸಿದ ಗ್ರಾಪಂ ಅಧ್ಯಕ್ಷ ದತ್ತು ಹೇರೂರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಪಿಡಿಒಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಭಾರಿ ಮಳೆ ಬೆಳೆ ಇಲ್ಲದೇ ಭೀಕರ ಬರಗಾಲ ಎದುರಾಗಿದೆ ಬಡ ಜನರು ಬೇರೆ ಕಡೆ ಗೂಳೆ ಹೋಗಬಾರದು ಎಂದು ಸರಕಾರ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದೆ ಆದರೆ ದೇವಲ ಗಾಣಗಾಪುರ ವ್ಯಾಪ್ತಿಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ದಿನ ನಿತ್ಯ ಕೂಲಿ ಕೆಲಸ ಸರಿಯಾಗಿ ಸಿಗುತ್ತಿಲ್ಲ ಸಿಕ್ಕರೂ ಸಂಬಳ ಸಮಯಕ್ಕೆ ಸಿಗುತ್ತಿಲ್ಲ ಮತ್ತು ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಕುಡಿಯುವ ನೀರು ಮತ್ತು ಮೂಲ ಸೌಲಭ್ಯ ನೀಡುತ್ತಿಲ್ಲ ಹೀಗಾಗಿ ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. – ವಿಜಯ ವಡಗೇರಿ, ಸಾಮಾಜೀಕ ಕಾರ್ಯಕರ್ತ ದೇವಲಗಾಣಪುರ
ಈ ಸಂದರ್ಭದಲ್ಲಿ ನೂರಾರು ಮಹಿಳಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.ಗಾಣಗಾಪುರ ಪೋಲಿಸ್ ಠಾಣೆ ಪಿಎಸ್ಐ ಪರಶುರಾಮ ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.