ಶಹಾಬಾದ: ನಗರದಲ್ಲಿ ಮಂಗಳವಾರ ಮಹಾದಾಸೋಹಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಅತ್ಯಂತ ವೈಭವ ಮತ್ತು ಶ್ರದ್ಧಾ ಭಕ್ತಿಯಿಂದ ನಡೆಯಿತು.ಈ ಅಮೂಲ್ಯ ಕ್ಷಣಕ್ಕೆ ಶರಣನ ಸಾವಿರಾರು ಭಕ್ತರು ಸಾಕ್ಷಿಯಾದರು.
ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ರಥೋತ್ಸವವನ್ನು ನಡೆಸಲು ಬೆಳಿಗ್ಗೆಯಿಂದಲೇ ಭರದ ತಯಾರಿ ಮಾಡಲಾಗಿತ್ತು. ತೇರಿಗೆ ಹೂವು-ತಳಿರು ತೋರಣ, ಬಣ್ಣ ಬಣ್ಣದ ಪರಾರಿಗಳಿಂದ ಅಲಂಕಾರ ಲ ಮಾಡಲಾಗಿತ್ತು.
ಬೆಳಗ್ಗೆ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ,ಸಹಸ್ರ ಬಿಲ್ವಾರ್ಚನೆ ವಿಶೇಷ ಪೂಜೆ ನೇರವೇರಿದವು. ಮಧ್ಯಾಹ್ನ ಅಡವಿತಾತರ ಗದ್ದುಗೆಯಿಂದ ಶರಣಬಸವೇಶ್ವರ ದೇವಾಲಯದವರೆಗೆ ನಂದಿಕೋಲು ಉತ್ಸವ ಜರುಗಿತು.
ಸಾಯಂಕಾಲ ಅಪಾರ ಭಕ್ತಾಧಿಗಳು ಭಕ್ತಿ ಭಾವದಿಂದ ರಥವನ್ನು ಎಳೆದರು. ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತಾಧಿಗಳು “ಶರಣಬಸವೇಶ್ವರ ಮಹಾರಾಜ ಕಿ ಜೈ” ಎಂದು ಜೈಕಾರ ಕೂಗುತ್ತಾ ತೇರಿಗೆ ಬಾಳೆಹಣ್ಣು, ಉತ್ತತ್ತಿಯನ್ನು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾತ್ರಿ ಗೀಗೀ ಪದಗಳು ಜರುಗಿದವು.
ಇದೇ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ವೀರಶೈವ ಯುವಕ ಮಂಡಳಿ ದಾಸೋಹ ಸೇವೆ ಸಲ್ಲಿಸಿದರು. ನಗರ ಪೊಲೀಸ್ ಠಾಣೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.