ಕಲಬುರಗಿ: ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡದೆ ವಿಫಲವಾಗಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರೈತ ಸಮುದಾಯ ನೋಟಾ ಮತದಾನ ಚಲಾಯಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರ ಪ್ರಮುಖ ಬೇಡಿಕೆ ಈಡೇರಿಸಿಲ್ಲ. ವಿಶೇಷವಾಗಿ ರೈತರ ಸಾಲ ಮನ್ನಾ ಮಾಡುವ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ನಿಟ್ಟಿನಲ್ಲಿ ಸಂಘದ ರಾಜ್ಯಾಧ್ಯಕ್ಷ ಹೆಚ್. ಆರ್. ಬಸವರಾಜು ನೇತೃತ್ವದಲ್ಲಿ ನೋಟಾ ಮತದಾನ ಚಲಾವಣೆ ಬಗ್ಗೆ ಜನಜಾಗೃತಿ ಮೂಡಿಸಲಿದ್ದು, ಈ ಬಗ್ಗೆ ರಾಜ್ಯ ಸಂಘದಲ್ಲೂ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ದೆಹಲಿಯಲ್ಲಿ ರೈತರಿಗೆ ಮರಣ ಶಾಸನವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿದರೂ ಕ್ಯಾರೆ ಎಂದಿಲ್ಲ, ಈ ವೇಳೆ ಸುಮಾರು 755ಕ್ಕೂ ಹೆಚಚು ರೈತರು ಹುತಾತ್ಮರಾಗಿದ್ದಾರೆ. ಹುತಾತ್ಮ ರೈತರಿಗೆ ಸೌಜನ್ಯಕ್ಕೂ ಸಾಂತ್ವಾನ ಹೇಳದ ಸರ್ಕಾರ ಬೇಕೆವೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯಿಂದ ರೈತರಿಗೆ ಮಾರಕವೇ ಹೊರತು ಪೂರಕವಾಗಿಲ್ಲ. ಹೀಗಾಗಿ, ‘ಬಿಜೆಪಿ ಅಳಿಸಿ ದೇಶ ಉಳಿಸಿ’ ಘೋಷವಾಕ್ಯದೊಂದಿಗೆ ಜನಜಾಗೃತಿ ಮಾಡಲಾಗುವುದು. ಅಲ್ಲದೆ, ಕಾಂಗ್ರೆಸ್ ಪಕ್ಷವು 50 ವರ್ಷದಲ್ಲಿ ಗುರುತರ ರೈತ ಯೋಜನೆ ರೂಪಿಸಿಲ್ಲ. ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ಸುಧಾರಿತ ಬೀಜ ಮತ್ತು ರಸಗೊಬ್ಬರ ಯೋಗ್ಯ ದರದಲ್ಲಿ ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಪ್ರಮುಖರಾದ ಸೋಮಣ್ಣಗೌಡ ಬಳಬಟ್ಟಿ, ಸಂತೋಷ ರಾಠೋಡ, ಭೀಮಾಶಂಕರ ಕಟ್ಟಿಮನಿ, ಸುಶೀಲಬಾಯಿ, ಸಿದ್ಧಣ್ಣಗೌಡ ಪೊಲೀಸ್ ಪಾಟೀಲ್ ಮತ್ತಿತರರಿದ್ದರು.