ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದ ಖರ್ಗೆ ಮೋದಿ ಗ್ಯಾರಂಟಿ ಕಾಗದದ ಮೇಲೆ ಇವೆ.ಆದರೆ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ ನಮ್ಮ ಗ್ಯಾರಂಟಿ ಯೋಜನೆಗಳಿಂದ ಬರುವ ಹಣವನ್ನು ಸಂಸಾರಿಕ ಸಮಸ್ಯೆ ಎದುರಾದಾಗ ಜನರು ಬಳಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕೋರವಾರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಚಿತ್ತಾಪುರದ “ಅಪರಂಜಿ “ಈಗ ನಾಪತ್ತೆಯಾಗಿ ವಿದೇಶದಲ್ಲಿ ನೆಲೆಸಿದ್ದಾನೆ. ದುಡ್ಡಿಗಾಗಿ ಅವನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರಕ್ಕೆ ಅಭ್ಯರ್ಥಿ ಯನ್ನಾಗಿ ಮಾಡಿರುವುದಕ್ಕೆ ಬಿಜೆಪಿಯವರು ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಸಂಸದ ಉಮೇಶ್ ಜಾಧವ ಜಿಲ್ಲೆಗೆ ಚಿತ್ತಾಪುರಕ್ಕೆ ಹಾಗೂ ನಿಮ್ಮ ಗ್ರಾಮಕ್ಕೆ ಏನು ಮಾಡಿದ್ದಾರೆ. ವಂದೆ ಭಾರತ ಎನ್ನುವ ಟ್ರೇನ್ ಬಿಟ್ಟಿದ್ದನ್ನೇ ದೊಡ್ಡದಾಗಿ ಬಿಂಬಿಸುವ ಜಾಧವ್, ಶ್ರೀಮಂತರೇ ಹೆಚ್ಚಾಗಿ ಓಡಾಡುವ ವಂದೆ ಭಾರತ ಟ್ರೇನ್ ಪ್ರಾರಂಭಿಸಿದ್ದಾರೆ ಒಂದು ವಾರದ ನಂತರ ಅದು ನಿಂತೋಗಿದೆ ಎಂದು ಮಾಹಿತಿ ಇದೆ ಎಂದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಮಾತನಾಡಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಪಕ್ಷದ ಗ್ಯಾರಂಟಿ ಎಂದು ಹೇಳಲಾಗುತ್ತದೆ. ಆದರೆ ಬಿಜೆಪಿ ಗ್ಯಾರಂಟಿಗಳನ್ನು ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಅವರಿಗೆ ಮೋದಿ ಬಿಟ್ಟರೆ ಬೇರೆ ಏನು ಇಲ್ಲ. ಭ್ರಷ್ಟಚಾರಿಗಳನ್ನು ಪಕ್ಕ ಕೂಡಿಸಿಕೊಂಡು ಕಾಂಗ್ರೆಸ್ ಭ್ರಷ್ಟಾಚಾರಿ ಪಕ್ಷ ಎಂದು ಮೋದಿ ಹೇಳುತ್ತಾರೆ ಎಂದು ಟೀಕಿಸಿದರು.
ಮಾಜಿ ಜಿಪಂ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ ಮಾತನಾಡಿ ಮೋದಿಯನ್ನ ಕೇವಲ ಟಿವಿ ಯಲ್ಲಿ ನೋಡಬಹುದು. ಆದರೆ ನಿಮ್ಮ ಕಷ್ಟಕ್ಕೆ ಖರ್ಗೆ ಸಾಹೇಬರು, ಪ್ರಿಯಾಂಕ್ ಖರ್ಗೆ ಸಹಾಯ ಮಾಡುತ್ತಾರೆ. ಖರ್ಗೆ ಅವರನ್ನು ಸೋಲಿಸಿದ್ದೇವೆ ಎನ್ನುವ ಜಾಧವ್ ಗೆದ್ದು ಹೋದ ಮೇಲೆ ಒಮ್ಮೆಯೂ ಗ್ರಾಮಗಳ ಕಡೆಗೆ ಬಂದಿಲ್ಲ, ಎಂದರು.
ವೇದಿಕೆಯ ಮೇಲೆ ಭೀಮಣ್ಣ ಸಾಲಿ, ಶಂಭುಲಿಂಗ ಗುಂಡಗುರ್ತಿ ಸೇರಿದಂತೆ ಹಲವರಿದ್ದರು.