ಕಲಬುರಗಿ: ಭಾರತೀಯ ಮೂಲದ ಕನ್ನಡಿಗ ಡಾ.ಹನಮರೆಡ್ಡಿ ಬಿರಾದಾರ್, ಕೃಷಿ ವಿಜ್ಞಾನಿ ಅಮೇರಿಕಾದ ಬ್ಯಾಟನ್ ರೋಜ್ ನಗರದಲ್ಲಿ ಏಪ್ರಿಲ್ 17 ರಂದು 48 ವಯಸ್ಸಿನಲ್ಲಿ ಅಕಾಲಿಕ ನಿಧನರಾದರು.
ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದ ದಿವಂಗತ ಜಿ ಬಿ ಬಿರಾದಾರ್ ಅವರ ಏಕೈಕ ಪುತ್ರರಾಗಿದ್ದರು. ಡಾ.ಹನಮರೆಡ್ಡಿ ಅವರು ತಾಯಿ, ಹೆಂಡತಿ, ಐದು ತಿಂಗಳ ಮಗು, ನಾಲ್ಕು ಜನ ಸಹೋದರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಮೆರಿಕದಿಂದ ಪಾರ್ಥಿವ ಶರೀರವನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇನ್ನೂ ಖಚಿತ ದಿನಾಂಕವನ್ನು ಕುಟುಂಬ ವರ್ಗದವರಿಗೆ ಸಂಬಂಧಿಸಿದವರಿಂದ ಮಾಹಿತಿ ರವಾನೆಯಾಗಿರುವುದಿಲ್ಲ. ಪಾರ್ಥಿವ ಶರೀರದ ನಿರೀಕ್ಷೆಯಲ್ಲಿರುವ ಕುಟುಂಬದವರಿಗೆ ಆತಂಕ ಆವರಿಸಿದೆ.ಡಾ.ಹನಮರೆಡ್ಡಿ ಅವರ ನಿಧನವಾರ್ತೆ ತಿಳಿದು ಕುಟುಂಬ ವರ್ಗದವರು, ಹಿತೈಷಿಗಳು,ಸ್ನೇಹಿತರು ಹಾಗೂ ಗ್ರಾಮಸ್ಥರು ಮನೆಗೆ ಸಾಂತನ ಹೇಳಲು ದಾವಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರ ಮೂಲಕ, ಜಿಲ್ಲಾಧಿಕಾರಿಗಳ ಮೂಲಕವೂ ಮತ್ತು ಸಂಸದರ ಮೂಲಕವೂ ಭಾರತೀಯ ರಾಯಭಾರಿ ಕಚೇರಿಗೆ ಪಾರ್ಥಿವ ಶರೀರದ ರವಾನಿಸುವ ಕುರಿತು ಮನವಿ ಮಾಡಿಕೊಳ್ಳಲಾಗಿತ್ತು.
ಡಾ.ಹನಮರೆಡ್ಡಿ ಅವರು ಅಮೇರಿಕಾದ ಲೂಸಿಯಾನ ಸ್ಟೇಟ್ ಯುನಿವರ್ಸಿಟಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಡಾ. ಸ್ಟೀವ್ ಹ್ಯಾರಿಸನ್ ನೇತೃತ್ವದಲ್ಲಿ ಸುಧಾರಿತ ಹೊಸ ಗೋಧಿ ತಳಿಯ ಸಂಶೋಧನಾ ಕಾರ್ಯದಲ್ಲಿ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಈ ಗೋಧಿ ತಳಿಯ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದರು.
ಇದಕ್ಕೂ ಮೊದಲು ಡಾ.ಹನಮರೆಡ್ಡಿ ಅವರು ಲೂಸಿಯಾನ ಸ್ಟೇಟ್ ಯುನಿವರ್ಸಿಟಿಯ ಪರಿಸರ ಮತ್ತು ಮಣ್ಣು ವಿಜ್ಞಾನ ಪ್ರಯೋಗಾಲಯದಲ್ಲಿ ತಳಿ ವಿಜ್ಞಾನ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಷಯದ ಮೇಲೆ ತಮ್ಮ ಪಿ ಎಚ್ ಡಿ ಅನ್ನು ಪೂರ್ಣಗೊಳಿಸಿದ್ದರು.
ಇವರ ಮಂಡಿಸಿದ ಪಿ ಎಚ್ ಡಿ ಪ್ರಬಂಧದ ಸಂಶೋಧನೆಗಾಗಿ ಲೂಸಿಯಾನ ಸ್ಟೇಟ್ ಯುನಿವರ್ಸಿಟಿಯ ಪೋಸ್ಟ್ ಡಾಕ್ಟರೇಟ್ ಸಂಶೋಧಕರಾಗಿ ಆಯ್ಕೆಯಾಗಿಸೇವೆ ಸಲ್ಲಿಸುತ್ತಿದ್ದರು.
ಡಾ.ಹನಮರೆಡ್ಡಿ ಅವರು ಬಾಲ್ಯದಿಂದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ತಮ್ಮ ಪ್ರೌಢ ಶಿಕ್ಷಣವನ್ನು ಜವಾಹರ ನವೋದಯ ವಿದ್ಯಾಲಯ ಆಲಮಟ್ಟಿಯಲ್ಲಿ, ಕೃಷಿ ವಿಜ್ಞಾನ ವಿಷಯದಲ್ಲಿ ಪದವಿ ಶಿಕ್ಷಣವನ್ನು ಕೃಷಿ ವಿಶ್ವವಿದ್ಯಾಲಯ ವಿಜಯಪುರದಲ್ಲಿ. ತಳಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಉತ್ತರ ಪ್ರದೇಶದ ಪಂಥ ನಗರ ಕೃಷಿ ವಿಶ್ವವಿದ್ಯಾಲಯದಲ್ಲಿ, ಪ್ರಾಜೆಕ್ಟ್ ರಿಸರ್ಚ್ ಅಸೋಸಿಯೇಟ್ಸ್ ಆಗಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಹೆಬ್ಬಾಳ ಬೆಂಗಳೂರು ಕಾರ್ಯನಿರ್ವಹಿಸಿದ್ದರು.
ನಂತರ ಸಂಶೋಧನೆಗಾಗಿ ಅಮೆರಿಕಕ್ಕೆ ತೆರಳಿ ಲೂಸಿಯಾನ ಸ್ಟೇಟ್ ಯುನಿವರ್ಸಿಟಯಲ್ಲಿ ಪಿ ಎಚ್ ಡಿ ಪೂರ್ಣಗೊಳಿಸಿ, ಅಲ್ಲಿಯೇ ಪೋಸ್ಟ್ ಡಾಕ್ಟರೇಟ್ ಸಂಶೋಧಕರಾಗಿ, ಕೃಷಿ ವಿಜ್ಞಾನಿಯಾಗಿ ಸೇವೆ ಆರಂಭಿಸಿದರು.
ಡಾ.ಹನಮರೆಡ್ಡಿ ಅವರ ನಿಧನಕ್ಕೆ ಇಂಡಿಯನ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಕಮಿಟಿ ಅಮೇರಿಕಾ ತೀವ್ರ ಸಂತಾಪವನ್ನು ವ್ಯಕ್ತಪಡಿದೆ. ಕರ್ನಾಟಕ ಕೃಷಿ ಪದವೀಧರ ಸಂಘದ ವತಿಯಿಂದ ವೆಂಕಟರಮಣ ರೆಡ್ಡಿ ಪಾಟೀಲ್ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.