ಕಲಬುರಗಿ: ಶಿಕ್ಷಣ ಪ್ರೇಮಿಗಳು, ಹಿರಿಯ ಮುತ್ಸದ್ದಿಗಳು ಹಾಗೂ ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ್ ಅವರ ನಿಧನದಿಂದಾಗಿ ಒಬ್ಬ ಹಿರಿಯ ಶಿಕ್ಷಣ ಪ್ರೇಮಿ ಹಾಗೂ ಮುತ್ಸದ್ದಿಯನ್ನು ಜಿಲ್ಲೆ ಕಳೆದುಕೊಂಡಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಸೇಡಂ ಪಟ್ಟಣದ ಹೊರವಲಯದಲ್ಲಿ ಮೃತರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಚಿವರು, ಡಾ ನಾಗರೆಡ್ಡಿ ಪಾಟೀಲ್ ಅವರು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಿದರು. 1983 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಜನರ ಸೇವೆ ಸಲ್ಲಿಸಿದರು.
ಶಿಕ್ಷಣ ಪ್ರೇಮಿ, ಜನಾನುರಾಗಿ, ಶಾಸಕ ಹೀಗೆ ಬಹುಮುಖ ಪ್ರತಿಭೆಯ ಡಾ ನಾಗರೆಡ್ಡಿ ಪಾಟೀಲ್ ಅವರ ನಿಧನ ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ನೋವು ತಂದಿದೆ.
ಈ ಸಂದರ್ಭದಲ್ಲಿ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಆ ಭಗವಂತ ಕುಟುಂಬ ವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಪೊಲೀಸ್ ಇಲಾಖೆಯ ಕವಾಯಿತು ತುಕಡಿಯಿಂದ ಮೂರು ಸುತ್ತು ಕುಶಾಲ ತೋಪು ಹಾರಿಸಿದರು. ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರದ ಗೌರವ ಸಲ್ಲಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ್ ಹಾಗೂ ಹಲವರಿದ್ದರು.