ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ 150 ಮತ್ತು ಅಭಿವೃದ್ಧಿ ಅಧಿಕಾರಿ ಸಮೂಹ ಸಿ ಹುದ್ದೆಗಳ ವಯೋಮಿತಿ ಸಡಿಲಿಕೆ ಮತ್ತು ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕು ಎಂದು ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಬಣ್ಣ ಜಮಾದಾರ ಮನವಿ ಮಾಡಿದರು.
ಹುದ್ದೆಗಳ ಭರ್ತಿಗಾಗಿ ಫೆ. 26, 2024 ರಂದು ಅಧಿಸೂಚನೆ ಹೊರಡಿಸಿದ್ದು, ಸ್ವಾಗತಾರ್ಹ ಹಾಗೂ ಸಂತೋಷದ ವಿಷಯ. ಆದರೆ ಅರ್ಜಿ ಸಲ್ಲಿಸಲು ಮೇ. 5ರಂದು ಕೊನೆ ದಿನವಾಗಿದೆ. ವಯೋಮಿತಿ ಹೆಚ್ಚಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಕೊರೊನಾ ಕಾಲದಿಂದ ಕಲ್ಯಾಣ ಕರ್ನಾಟಕ ಭಾಗದ ಅನೇಕ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಬಕಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಆದರೆ ವಯೋಮಿತಿ ಮೀರಿದ್ದರಿಂದ ಅರ್ಜಿ ಸಲ್ಲಿಸುವವರೆಗೆ 3 ವರ್ಷಗಳ ಕಾಲ ಅವಧಿ ವಿಸ್ತರಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಕಲಬುರಗಿಯವರೇ ಆಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಅನುಕೂಲ ಕಲ್ಪಿಸಬೇಕು ಎಂದರು.
ಬಿ.ಎಂ. ರಾವೂರ, ರಾಜೇಂದ್ರ ತೆಲ್ಲೂರ, ಪ್ರಕಾಶ ಹೊಟ್ಕರ್, ಸಿದ್ದಣ್ಣ ಎಚ್ ಇತರರು ಇದ್ದರು.