ಕಲಬುರಗಿ: ಕಳೆದ ಬಾರಿಯ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ದಿಂದ ವಂಚಿತಗೊಂಡಿದ್ದ ಮಾಜಿ ರಾಜ್ಯ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ಅವರು ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅಮರನಾಥ್ ಪಾಟೀಲ್ ಅವರಿಗೆ ಈಶಾನ್ಯ ವಲಯ ಪದವೀಧರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ. ಅಮರನಾಥ್ ಪಾಟೀಲ್ ಅವರಿಗೆ ಟಿಕೆಟ್ ಘೋಷಿಸಿದ್ದರಿಂದ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಸಂತಸ ಉಂಟಾಗಿದ್ದು, ಅವರಿಗೆ ಅಭಿನಂದಿಸಲು ಆರಂಭಿಸಿದ್ದಾರೆ. ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದರೂ ಸಹ ಯಾವುದೇ ರೀತಿಯಲ್ಲಿ ಅಸಮಾಧಾನ ಹೊರಹಾಕದೇ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ತಮಗೆ ಕೊಟ್ಟ ಹೊಣೆಯನ್ನು ಅಮರನಾಥ್ ಪಾಟೀಲ್ ಅವರು ಜವಾಬ್ದಾರಿಯಿಂದ ನಿಭಾಯಿಸಿದ್ದರು. ಹೀಗಾಗಿ ಅವರಿಗೆ ಮತ್ತೆ ಟಿಕೆಟ್ ಸಿಗಲು ಕಾರಣವಾಯಿತು ಎಂಬುದು ಕಾರ್ಯಕರ್ತರಲ್ಲಿನ ಅಭಿಪ್ರಾಯವಾಗಿದೆ.
ಅಮರನಾಥ್ ಪಾಟೀಲ್ ಅವರು ಕಳೆದ 2012ರಿಂದ 2018ರ ಜೂನ್ 21ರವರೆಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಮರನಾಥ್ ಪಾಟೀಲ್ ಅವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆಯಿದೆ. ದೊಡ್ಡಪ್ಪ ದಿ. ಚಂದ್ರಶೇಖರ್ ಪಾಟೀಲ್ ಅವರು ಮಾಜಿ ಶಾಸಕರು. ದೊಡ್ಡಮ್ಮ ದಿ. ಲಲಿತಾಬಾಯಿ ಚಂದ್ರಶೇಖರ್ ಪಾಟೀಲ್ ಅವರು ಮಾಜಿ ಶಾಸಕರು. ತಂದೆ ದಿ. ನೀಲಕಂಠರಾವ್ ಪಾಟೀಲ್ ಅವರು ಮಾಜಿ ಶಾಸಕರು.
ಇನ್ನು ಅಮರನಾಥ್ ಪಾಟೀಲ್ ಅವರು ವರ್ತಕರು, ಕೈಗಾರಿಕೋದ್ಯಮಿ, ವ್ಯವಸಾಯ ಹಾಗೂ ಸಮಾಜ ಸೇವೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ಕಲ್ಯಾಣ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷರಾಗಿ, ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಬಿಕಾಂ ಪದವೀಧರರಾಗಿರುವ ಅಮರನಾಥ್ ಪಾಟೀಲ್ ಅವರು ಕಟ್ಟಾ ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಬಾರಿಯೇ ಅಮರನಾಥ್ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದರೆ ಬಿಜೆಪಿ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯಗಳು ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಮೇಲೆ ಕೇಳಿಬಂತು. ಹೀಗಾಗಿ ವಿಳಂಬವಾಗಿ ಅಭ್ಯರ್ಥಿ ಘೋಷಣೆ ಮಾಡಿದರೂ ಸಹ ಅಮರನಾಥ್ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ಕಮಲ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.