ಶಹಾಬಾದ:ತಾಲೂಕಿನ ತಹಸೀಲ್ದಾರ ಜಗದೀಶ ಚೌರ್ ಅವರು ಶನಿವಾರ ಮರತೂರ ಗ್ರಾಮದ ನಾಲ್ಕು ಜನ ರೈತರ ಹೊಲಗಳಿಗೆ ತೆರಳಿ ರೈತರು ಇದ್ದ ಸ್ಥಳದಲ್ಲಿಯೇ ಪಹಣಿಗೆ ಆಧಾರ್ ಲಿಂಕ್ ಮಾಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಜಗದೀಶ ಚೌರ್, ರೈತರು ತಮ್ಮ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಜುಲೈ ಅಂತ್ಯದೊಳಗೆ ಕಡ್ಡಾಯವಾಗಿ ಆಧಾರ್ ಲೀಂಕ್ ಮಾಡಿಸುವುದು ಕಡ್ಡಾಯ. ಅದೇ ರೀತಿ ದೊಡ್ಡ ಮತ್ತು ಸಣ್ಣ ರೈತರ ಮಾಹಿತಿ ದಾಖಲಿಸುವುದರ ಜೊತೆಗೆ, ಭೂ ಸಂಬಂಧಿತ ವಂಚನೆ ತಡೆಯಲು ಈಗ ಸರ್ಕಾರವು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತಂದಿದೆ.
ಸರ್ಕಾರ ಆಧಾರ್ ಕಾರ್ಡ್ ಲಿಂಕ್ ಮಾಡಲು ಜುಲೈ ಅಂತ್ಯದೊಳಗೆ ಗಡುವು ನೀಡಿದೆ.
ರೈತರ ಜಮೀನುಗಳಿಗೆ ಆಧಾರ್ ಲಿಂಕ್ ಮಾಡಿಸುವ ಕಾರ್ಯ ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಇದನ್ನು ಜಾರಿಗೆ ತಂದಿದೆ.
ರಾಜ್ಯದಲ್ಲಿನ ಎಲ್ಲಾ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಈ ಪ್ರಯುಕ್ತ ಬಾಕಿ ಇರುವ ರೈತರು ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸಬೇಕಾಗಿದೆ ಎಂದರು.