ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ ರಾಷ್ಟ್ರದ ಆರೋಗ್ಯ ಹಾಗೂ ಆರ್ಥಿಕ ಪ್ರಗತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಅವರು ಸಮೀಪದ ಝಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ಜಾಗತಿಕ ಇಂಧನ ಸ್ವಾತಂತ್ರ್ಯ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಬಹುತೇಕವಾಗಿ ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಅನಿಲವನ್ನು ಇಂಧನವನ್ನಾಗಿ ಬಳಸಲಾಗುತ್ತಿದ್ದು, ಇವುಗಳು ಮುಗಿದುಹೋಗುವ ಮತ್ತು ಪರಿಸರ ಮಾಲಿನ್ಯ ಉಂಟುಮಾಡುತ್ತವೆ. ಇವುಗಳಿಗೆ ಪರ್ಯಾಯವಾಗಿವಾಗಿ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್, ಪರಮಾಣು ಶಕ್ತಿ, ಜೈವಿಕ ಡೀಸೆಲ್, ಭೂಉಷ್ಣ ಶಕ್ತಿಗಳಂತಹ ಇನ್ನಿತರ ಪರಿಸರಸ್ನೇಹಿ ಇಂಧನಗಳಾಗಿದ್ದು, ಇವುಗಳ ಮೂಲಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ, ಪತ್ತೆ ಹಚ್ಚಿ, ಅವುಗಳ ಬಳಕೆ ಮಾಡುವುದು ಪ್ರಸ್ತುತ ಅಗತ್ಯವಾಗಿದೆ.ಯಾವುದೇ ರಾಷ್ಟ್ರದ ಆರ್ಥಿಕ ಪ್ರಗತಿ, ಆ ರಾಷ್ಟ್ರದಲ್ಲಿ ಲಭ್ಯವಿರುವ ಇಂಧನದ ಮೂಲಗಳನ್ನು ಅವಲಂಬಿಸಿದೆ.
ಇಂಧನವಿಲ್ಲದ ಆರ್ಥಿಕ ಪ್ರಗತಿ ನಾವು ಊಹೆ ಮಾಡಲು ಸಾಧ್ಯವಿಲ್ಲ. ಇಂತಹ ಅಮೂಲ್ಯವಾದ ಸಂಪತ್ತು ಇಂದು ವಿವಿಧ ಕಾರಣಗಳಿಂದ ಬರಿದಾಗುತ್ತಿರುವುದು ರಾಷ್ಟ್ರದ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ತೊಂದರೆಯಾಗಿದೆ. ಇಂಧನದ ಸಂರಕ್ಷಣೆ ಮಾಡಬೇಕಾಗಿದೆ. ಪರ್ಯಾಯ ಇಂಧನಗಳ ವ್ಯಾಪಕ ಬಳಕೆ, ಇಂಧನದ ಸದುಪಯೋಗದ ಮೂಲಕ ದೇಶ ಇಂಧನದಲ್ಲಿ ಸ್ವಾವಲಂಬನೆ ಸಾಧಿಸುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ನಿವತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಾಂಗ, ಶಿಕ್ಷಕರಾದ ಶಾರದಾಬಾಯಿ ಲಂಡನಕರ್, ಶಾಂತಾಬಾಯಿ ಹಿರೇಮಠ, ಈರವ್ವ ಹಿರೇಕೆನ್ನೂರ್, ಸಿಬ್ಬಂದಿಗಳಾದ ಸಂಗೀತಾ ಕಟ್ಟಿಮನಿ, ನಿಂಗ, ಪೂಜಾರಿ, ಶಿಲ್ಪಾ ನಡವಿನಕರ್, ಭಾರತಿಬಾಯಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.