ಕಲಬುರಗಿ: ಮಹಿಳೆಯರಿಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿ, ಅವುಗಳನ್ನು ಬದ್ದತೆಯಿಂದ ಅನುಷ್ಠಾನಗೊಳಿಸಬೇಕು. ಎಲ್ಲಾ ಮಹಿಳೆಯರು ಆ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನುಗ್ಗಿದ್ದರೇ, ರಾಷ್ಟ್ರದ ಅಭಿವೃದ್ಧಿ ವೇಗವನ್ನು ಪಡೆದುಕೋಳ್ಳಲು ಸಾಧ್ಯವಾಗುತ್ತದೆಯೆಂದು ಲೇಖಕಿ, ಸಮಾಜ ಸೇವಕಿ ಡಾ.ಸವಿತಾ ಸಿರಗೋಜಿ ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ’ಜ್ಞಾನ ಟ್ಯೂಟೋರಿಯಲ್ಸ್’ನಲ್ಲಿ, ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ’ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹೀಳಾ ಸಬಲೀಕರಣಕ್ಕೆ ಬಸವಾದಿ ಶರಣರ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲ. ಪ್ರಕೃತಿಯ ಸಮತೋಲನೆಗೆ ಗಂಡು ಮತ್ತು ಹೆಣ್ಣು ಇಬ್ಬರೂ ಅಗತ್ಯವಾಗಿದೆ.ಇಲ್ಲಿ ಯಾರೂ ಮೇಲು ಮತ್ತು ಕೀಳಲ್ಲ. ಲಿಂಗ ತಾರತಮ್ಯ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ಸಂಪೂರ್ಣ ನಿಲ್ಲಬೇಕು. ಇದರಿಂದಲೇ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿದೆ. ಸಮಾಜ ಮಹಿಳೆಯರ ಬಗ್ಗೆ ಪೂಜ್ಯನೀಯ ಭಾವನೆಯನ್ನು ತಾಳಬೇಕು. ಸರಿಸಮಾನವಾದ ಪ್ರಾಧಾನ್ಯತೆಯನ್ನು ನೀಡಬೇಕು. ಆಗ ಮಹಿಳೆ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಿದೆ. ಕೇವಲ ಕಾಯ್ದೆ ಹಾಗೂ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ. ಮನಸುಗಳ ಬದಲಾಣೆಗೆ ವ್ಯಾಪಕವಾದ ಜನಜಾಗೃತಿಯಾಗಬೇಕೆಂದರು.
ಸಂಸ್ಥೆಯ ಅನುರಾಧಾ ಟಿಳ್ಳೆ ಮಾತನಾಡಿ, ಮಹಿಳೆಯರು ಬಹುಮುಖ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರಿಗೆ ಅವಕಾಶಗಳನ್ನು ನೀಡಿದರೆ ಪುರುಷನಿಗಿಂತ ಯಾವದೇ ರೀತಿಯಲ್ಲಿ ಕಡಿಮೆಯಿಲ್ಲದ ಸಾಧನೆಯನ್ನು ಮಾಡುತ್ತಾರೆ. ಮಹಿಳೆಯರು ಎಂದಿಗೂ ಕೂಡಾ ಕೀಳರಿಮೆ ಭಾವನೆಯನ್ನು ತಾಳದೆ, ನಿರಂತರ ಸಾಧನೆಯನ್ನು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸಂಜೀವಕುಮಾರ ಹೇರೂರ, ಶ್ವೇತಾ ಪಾಟೀಲ, ಮಹಾದೇವ ತಳವಾರ, ಸೈಯದಸಾಬ್, ರಾಜು, ರಾಯಮ್ಮ ಹಿಂದಿನಮನಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.