ಸತ್ಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ

0
46

ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು ಶರಣ ಸಾಹಿತಿ ಡಾ. ಜೆ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಡಾ. ಎಂ.ಎಂ. ಕಲಬುರಗಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಹುತಾತ್ಮ ಡಾ. ಎಂ.ಎಂ. ಕಲಬುರ್ಗಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಅವರು, ವಿಜಯನಗರ ಸಾಮ್ರಾಜ್ಯ ಹಾಗೂ ಲಿಂಗಾಯತ ಪರಂಪರೆಯ ನಿಜ ಚರಿತ್ರೆಯನ್ನು ಕಟ್ಟಿಕೊಟ್ಟ ಕಲಬುರ್ಗಿಯವರು ಸಾವಿನ ನಂತರ ತಮ್ಮ ವೈಚಾರಿಕ ಚಿಂತನೆಯ ಮೂಲಕ ಜನರ ಮಧ್ಯೆ ಜೀವಂತವಾಗಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಸಂಪ್ರದಾಯವಾದಿಗಳು ಹಾಗೂ ಪಟ್ಟಭದ್ರರ ಕುತಂತ್ರಕ್ಕೆ ಬಲಿಯಾದ ಕಲಬುರ್ಗಿಯವರು ಲಿಂಗಾಯತ ಸಂಸ್ಕೃತಿಯ ಮೇಲೆ ವೈದಿಕ ದಾಳಿಯನ್ನು ಕಂಡು ಹಿಡಿದು ಲಿಂಗಾಯತ ಧರ್ಮದ ಅಸ್ಮಿತೆ ಕಾಪಾಡಿದ ಮಹಾನ್ ಚಿಂತಕರಾಗಿದ್ದರು ಎಂದರು.

ಲಿಂಗಾಯತ ಚಳವಳಿ ಇಂದು ನಿನ್ನೆಯದಲ್ಲ. 1945ರಿಂದಲೇ ಆರಂಭವಾದುದು. ಲಿಂಗಾಯತ ಐಕ್ಯ ಸಂಘದ ಮೂಲಕ ಹೋರಾಟ ಮಾಡಿದ್ದರು.‌ ವಿವಾದಗ್ರಸ್ಥ ವಚನ ದರ್ಶನ ಕೃತಿ ಶರಣ ಸಾಹಿತ್ಯ ಹಾಗೂ ಲಿಂಗಾಯತ ಧರ್ಮವನ್ನು ನಾಶ ಮಾಡುವ ಹುನ್ನಾರವಿದ್ದು, ಈ ಬಗ್ಗೆ ಜಾಗೃತರಾಗಿರಬೇಕು ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಆಳಂದ ತೋಂಟದಾರ್ಯ ಅನುಭವ ಮಂಟಪದ ವಿಶ್ವನಾಥ ಕೋರಣೇಶ್ವರ ಮಾತನಾಡಿ, ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಕರ್ನಾಟಕದ ಮೊಟ್ಟ ಮೊದಲ ಸ್ವತಂತ್ರ ಧರ್ಮ. ಬಸವಣ್ಣನವರು ಈ ನೆಲದ ಭೂಮಿಪುತ್ರರು. ಯುವ ಪೀಳಿಗೆ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ, ಚಿಂತಕ ಮಾರುತಿ ಗೋಖಲೆ, ಜಿಲ್ಲಾ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಶೈಲ ಘೂಳಿ ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜೇವರ್ಗಿ ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಬೆಂಗಳೂರು ಸಿಸಿಬಿ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಜೋತರ್ಲಿಂಗ ಹೊನಕಟ್ಟಿ, ಮಹಾಂತೇಶ ಕಲಬುರ್ಗಿ ವೇದಿಕೆಯಲ್ಲಿದ್ದರು.

ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗಣ್ಣ ಗುಳಗಿ ನಿರೂಪಿಸಿದರು. ಸಂಗಯ್ಯ ಸ್ವಾಮಿ ಹಳ್ಳದಮಠ ಪ್ರಾರ್ಥನೆಗೀತೆ ಹಾಡಿದರು. ಜಗದೀಶ ಕಲಬುರ್ಗಿ ಕಲಬುರ್ಗಿ ವಂದಿಸಿದರು.

ಶಿವಶರಣಪ್ಪ ಮೂಳೆಗಾಂವ, ಡಾ. ಶಾಂತಾ ಅಷ್ಟಿಗೆ, ಪ್ರಭುಲಿಂಗ ಮಹಾಗಾಂವಕರ್, ನಾಗರಾಜ ನಿಂಬರಗಿ, ಸತೀಶ ಸಜ್ಜನಶೆಟ್ಟಿ, ಹಣಮಂತರಾಯ ಕುಸನೂರ, ಶರಣು ಸಿನ್ನೂರ್, ಶರಣು ಮಹಾಜನ್, ಪ್ರೇಮಚಂದ ರಾಯಕೋಟ ಇತರರಿದ್ದರು.

ಕೊಲ್ಲುವುದಾದರೆ ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ ಅವರ ವಿಚಾರಗಳನ್ನಲ್ಲ. ಅದರಂತೆ ಕಲಬುರ್ಗಿಯವರು ಸಹ ಸತ್ತಿರಬಹುದು.‌ ಆದರೆ ಅವರ ವಿಚಾರಗಳಿಗೆ ಸಾವಿಲ್ಲ. -ಪ್ರೊ. ಆರ್.ಕೆ. ಹುಡಗಿ, ಚಿಂತಕರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here