ಗುತ್ತಿಗೆ ಪದ್ದತಿ ಬಿಟ್ಟು ಯುವ ಜನರ ಉದ್ಯೋಗಕ್ಕಾಗಿ ಖಾಯಂ ನೇಮಕಾತಿ ಜಾರಿಗೊಳಿಸಿ: ಬಿಲ್ಲವ್

0
107

ಕಲಬುರಗಿ: ಸರ್ಕಾರಗಳು ಗುತ್ತಿಗೆ ಪದ್ದತಿಯನ್ನು ಕೈಬಿಟ್ಟು ಖಾಯಂ ನೇಮಕಾತಿ ಕೈಗೊಳ್ಳುವ ಮೂಲಕ ಯುವಜನರ ಹಿತವನ್ನು ಕಾಪಾಡಬೇಕು ಎಂದು ಶಹಾಬಾದ್ ಎಸ್.ಎಸ್. ಮರಗೋಳ್ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ. ಕೆ.ಬಿ. ಬಿಲ್ಲವ್ ಅವರು ಇಲ್ಲಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಮಟ್ಟದ ಏಳನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಯಂ ನೇಮಕಾತಿ ಕೈಗೊಳ್ಳದೇ ಗುತ್ತಿಗೆ ಪದ್ದತಿ, ಹೊರ ಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಂಡು ಯುವಜನರ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದರು.

Contact Your\'s Advertisement; 9902492681

ವಿದ್ಯಾವಂತರು ಉದ್ಯೋಗ ಹೊಂದುವ ರೀತಿಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಸರ್ಕಾರದ ಮಟ್ಟದಲ್ಲಿಯೇ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸಹ ಅವುಗಳನ್ನು ಭರ್ತಿ ಮಾಡಿಕೊಳ್ಳದೇ ಹೊರಗುತ್ತಿಗೆ ನೇಮಕಾತಿ ಮಾಡಿಕೊಳ್ಳುವ ಮೂಲಕ ಇಡೀ ವ್ಯವಸ್ಥೆಯನ್ನು ಹದಗೆಡಿಸಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಹಾಗೂ ಉದ್ಯೋಗಕ್ಕೆ ಸರ್ಕಾರಗಳು ಎಲ್ಲಿಯವರೆಗೆ ಒತ್ತು ನೀಡುವುದಿಲ್ಲವೋ ಅಲ್ಲಿಯವರೆಗೆ ರಾಷ್ಟ್ರದ ಸಮಗ್ರ ಪ್ರಗತಿ ಅಸಾಧ್ಯ ಎಂದು ಅವರು ಹೇಳಿದರು.

ಎಐವೈಡಿವೈಓ ಅಖಿಲ ಭಾರತ ಅಧ್ಯಕ್ಷ ಕಾ. ರಾಮಾಂಜನಪ್ಪ ಆಲ್ದಳ್ಳಿ ಅವರು ಮಾತನಾಡಿ, ಕೇಂದ್ರ ಸರ್ಕಾರವು ಬಂಡವಾಳಶಾಹಿ ಪರ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಇಡೀ ಭಾರತೀಯ ಆರ್ಥಿಕ ವ್ಯವಸ್ಥೆಯ ಮೇಲೆ ಅಷ್ಟೇ ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿಯೂ ಗಂಭೀರ ಪರಿಣಾಮ ಬೀರುತ್ತಿವೆ. ಬಡವರ ಹಾಗೂ ಕೃಷಿ, ಕೂಲಿ ಕಾರ್ಮಿಕರ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಖಾಸಗೀಕರಣ, ಉದಾರೀಕರಣದ ನೆಪದಲ್ಲಿ ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಸರ್ಕಾರವು ದುಡಿಯುವ ಕೈಗಳಿಗೆ ಉದ್ಯೋಗ ಕೊಡುವಲ್ಲಿ ವಿಫಲವಾಗಿದೆ ಎಂದು ಅವರು ದೂರಿದರು. ಎಐಡಿವೈಓ ರಾಜ್ಯ ಉಪಾಧ್ಯಕ್ಷ ಶರಣಪ್ಪ ಉದ್ಬಾಳ್ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಎಐಡಿವೈಓ ಜಿಲ್ಲಾಧ್ಯಕ್ಷ ಮಹೇಶ್ ನಾಡಗೌಡ ಅವರು ವಹಿಸಿದ್ದರು. ಅತಿಥಿಗಳಾಗಿ ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಕಾ. ಎಚ್.ವಿ. ದಿವಾಕರ್ ಅವರು ಆಗಮಿಸಿದ್ದರು.

ನಿಂಗಣ್ಣ ಜಂಬಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಜಗನ್ನಾಥ್ ಎಸ್.ಎಚ್., ಭೀಮಾಶಂಕರ್ ಪಾಣೇಗಾಂವ್, ಕಾರ್ಯದರ್ಶಿ ನಿಂಗಣ್ಣ ಜಂಬಗಿ, ಅಂಬಿಕಾ ಎಸ್.ಜಿ., ಈಶ್ವರ್ ಕೆ., ಮಲ್ಲಿನಾಥ್ ಹುಂಡೇಕಲ್ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಗರದ ರೈಲು ನಿಲ್ದಾಣದಿಂದ ಕನ್ನಡ ಭವನದವರೆಗೆ ನೂರಾರು ಸಂಖ್ಯೆಯಲ್ಲಿನ ಯುವ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಜಿಲ್ಲೆಯಲ್ಲಿ ಶ್ರಮಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಹೆಚ್ಚಿನ ಉದ್ಯೋಗ ಮಾಡಲು, ಉದ್ಯೋಗ ನೇಮಕತಿಗಾರಿ ಇರುವ ಅರ್ಜಿ ಶುಲ್ಕ ರದ್ದುಪಡಿಸುವಂತೆ, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅದರಲ್ಲಿನ ಭ್ರಷ್ಟಾಚಾರ ನಿಯಂತ್ರಣ, ಐಟಿಐ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ಕಲ್ಪಿಸುವುದು, ಅಶ್ಲೀಲ ಸಿನೇಮಾ ಸಾಹಿತ್ಯ ಪ್ರಸಾರ ತಡೆಗಟ್ಟುವುದು, ಗುತ್ತಿಗೆ ಆಧಾರದ ನೇಮಕಾತಿಯನ್ನು ಕೈಬಿಟ್ಟು, ಖಾಯಂ ನೇಮಕಾತಿಯನ್ನು ಜಾರಿಗೊಳಿಸಿ ನೇಮಕಾತಿಗಳನ್ನು ನಿಯಮಿತವಾಗಿ ನಡೆಯುವಂತೆ ಕ್ರಮ ಕೈಗೊಳ್ಳುವಂತೆ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಸಮರ್ಪಕವಾಗಿ ಕಲ್ಪಿಸುವುದು, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು ಮುಂತಾದ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಸಮ್ಮೇಳನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here