ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಚಂದ್ರಶೇಖರ ವೈ.ಶಿಲ್ಪಿ

0
52

ಕಲಬುರಗಿ: ಪ್ರತಿಯೊಬ್ಬರಲ್ಲಿಯೂ ಒಂದು ಕಲೆಯಿರುತ್ತದೆ. ಅದನ್ನು ಕೆಲವರು ವ್ಯಕ್ತಪಡಿಸಿ ಕಲಾವಿದರಾಗುತ್ತಾರೆ. ಕಲೆ ಎಂಬುದು ಬಹು ಅಮೂಲ್ಯವಾಗಿದ್ದು, ಅದರ ಬೆಲೆ ಕಟ್ಟಲಾಗದು. ಇದು ಆತ ಹೊಂದಿರುವ ಭಾವನೆಯ ಪ್ರತಿಬಿಂಬವಾಗಿದೆ. ಕಲಾವಿದರಿಗೆ ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿದರೆ ಅವರು ಹೆಚ್ಚಿನ ಸೇವೆ ಮಾಡಲು ಸಾಧ್ಯವಾಗುತ್ತದೆಯೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಲ್ಪ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಹೇಳಿದರು.

ಅವರು ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ’ರಾಷ್ಟ್ರೀಯ ಕರಕುಶಲ ಸಪ್ತಾಹ’ದ ನಿಮಿತ್ಯ ಭಾನುವಾರ ಸಂಜೆ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲಿ ಗೌರವ ಸ್ವೀಕರಿಸಿ ಮಾತನಾಡುತ್ತಾ, ಕಲ್ಲು, ಕಟ್ಟಿಗೆ, ಮಣ್ಣು ಸೇರಿದಂತೆ ಮತ್ತಿತರ ವಸ್ತುವನ್ನು ಸುಂದರ ಮೂರ್ತಿಯನ್ನಾಗಿಸಿ, ಅದಕ್ಕೆ ಒಂದು ಮಹತ್ತರ ಬೆಲೆ ತರುವುದು ಕಲಾವಿದರಿಂದ ಸಾಧ್ಯವಿದೆಯೆಂದರು.

Contact Your\'s Advertisement; 9902492681

ಬಳಗದ ಸಂಸ್ಥಾಪಕ ಅಧ್ಯಕ್ಷ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಚಂದ್ರಶೇಖರ ವೈ.ಶಿಲ್ಪಿಯವರು ಕಟ್ಟಿಗೆ,ಕಲ್ಲಿನಲ್ಲಿ ಅರಳಿಸಿದ ಭವ್ಯವಾದ ಮೂರ್ತಿಗಳು ಅವರಲ್ಲಿರುವ ಅದ್ಭುತವಾದ ಕಲೆಗೆ ಸಾಕ್ಷಿಯಾಗಿದೆ. ಇವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಹಾಗೂ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ, ಗೌರವಗಳನ್ನು ನೀಡಿವೆ.ಇಂತಹ ಅಪರೂಪದ ಶಿಲ್ಪ ಕಲಾವಿದರು ತಾವಷ್ಟೇ ಇದನ್ನು ಮಾಡದೇ, ಇಡೀ ಕುಟುಂಬವೇ ಕಲೆಯ ಉಳಿವು ಮತ್ತು ಬೆಳವಣಿಗೆಗೆ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯವಾಗಿದೆಯೆಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಕಲೆಗೆ ಎಂದೆಂದಿಗೂ ಬೆಲೆಯಿದೆ. ಇಂತಹ ಬಹುಮುಖ ವ್ಯಕ್ತಿತ್ವದ ಶಿಲ್ಪ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಬೇಕೆಂಬ ಉದ್ದೇಶದಿಂದ ನಮ್ಮ ಬಳಗವು ಈ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದು ನುಡಿದರು.

ಕಾರ್ಯಕ್ರಮದಲ್ಲಿ ದೇವಕಮ್ಮ ಶಿಲ್ಪಿ, ಗಾಯತ್ರಿ ಶಿಲ್ಪಿ, ವಿನಾಯಕ ಶಿಲ್ಪಿ,ದೇವಕ್ಕಮ್ಮ ಸಿ.ಶಿಲ್ಪಿ, ಮೌನೇಶ ಕಂಬಾರ, ಮಹೇಶ ಬಡಿಗೇರ, ಪ್ರಾಣೇಶ ಬಡಿಗೇರ, ಪ್ರವೀಣ ಬಡಿಗೇರ, ಬಳಗದ ಸದಸ್ಯರಾದ ರಾಜಕುಮಾರ ಬಟಗೇರಿ, ಅಣ್ಣಾರಾವ ಮಂಗಾಣೆ, ಅಮರ ಬಂಗರಗಿ, ಶಿವಕುಮಾರ ಮುತ್ತಾ, ಅಭಿಷೇಕ ಸರಾಫ್ ಸೇರಿದಂತೆ ಕುಟುಂಬದ ಬಂಧುಗಳು, ಬಳಗದ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here